Saturday, January 12, 2008

ಅವನಿಗೆ ಸಂಗಾತಿ, ಉಳಿದವರಿಗೆ ಸಾಕ್ಷಿ


ಗೋವಿಂದ ಮಡಿವಾಳರ

ಒಬ್ಬ ಮಹಿಳೆ ತನ್ನ ಪತಿಯ ಆಸ್ತಿ ತನಗೆ ಸಿಕ್ಕೀತೆ ಎಂಬ ನಿರೀಕ್ಷೆಯಲ್ಲಿ ನ್ಯಾಯಾಲಯದ ಬೆಂಚೊಂದರ ಮೇಲೆ ಕುಳಿತಿದ್ದಾಳೆ. ಇನ್ನೊಂದೆಡೆ ಅವಳ ಆಸ್ತಿ ಹಕ್ಕಿನ ಹೋರಾಟಕ್ಕೆ ಕೋರ್ಟ್ ಅಂತಿಮ ತೆರೆ ಎಳೆದು ನಮ್ಮ ಪರ ಜಯ ಸಿಕ್ಕೀತು ಎಂದು ಕೆಲವರು ಕುಳಿತ್ತಿದ್ದಾರೆ.
ಆಗ ನ್ಯಾಯಾಧೀಶರು.... ಈ ಲಗ್ನಪತ್ರ ನಿಮ್ಮ ಬಳಿ ಹೇಗೆ ಬಂತು?. ಅದೂ ನಿಮ್ಮ ಅಥವಾ ನಿಮ್ಮ ಸಂಬಂಧಿಗಳ ಮದುವೆಯ ಲಗ್ನಪತ್ರವೂ ಅಲ್ಲ. ಮದುವೆಯಾಗಿ ಇಷ್ಟು ವರ್ಷಗಳ ತನಕ ನಿಮ್ಮ ಬಳಿ ಹೇಗೆ ಉಳಿಯಿತು? ಎಂದು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಬಂದಿದ್ದ ರಾಮನಾಥ ಬನಶಂಕರಿ ಅವರಿಗೆ ನ್ಯಾಯಾಧೀಶರೇ ಸ್ವತಹ ಪ್ರಶ್ನಿಸಿದರು.
ಸರ್ ನನಗೆ ಯಾರೇ ತಮ್ಮ ಮದುವೆ ಕರೆಯೋಲೆ ಕಳಿಸಲಿ ಅಥವಾ ಹುಟ್ಟುಹಬ್ಬದ ಆಮಂತ್ರಣ ಪತ್ರಿಕೆ ಕಳಿಸಿದರೂ ಅವುಗಳನ್ನು ಸಂಗ್ರಹಿಸಿ ಇಡುವ ಹವ್ಯಾಸ ಇದೆ. ನನ್ನ ಬಳಿ ಸಾವಿರಾರು ಲಗ್ನ ಪತ್ರಿಕೆ, ಸ್ನೇಹಿತರು ಬರೆದ ಪತ್ರ, ಹುಟ್ಟುಹಬ್ಬದ, ಗೃಹಪ್ರವೇಶದ ಆಮಂತ್ರಣ ಪತ್ರ ಹೀಗೆ ಹಲವಾರು ಪತ್ರಗಳು ನಮ್ಮ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದೇನೆ ಎಂದರು.
ಹಾಗಾದರೆ ಈ ಲಗ್ನ ಪತ್ರದ ಹಿಂದಿನ ದಿನಾಂಕಿನ ಒಂದು ನೂರು, ಮತ್ತು ಅದರ ಪೂರ್ವದಲ್ಲಿನ ಒಂದು ನೂರು ಪತ್ರಗಳನ್ನ ಅಥವಾ ಲಗ್ನ ಪತ್ರಿಕೆಗಳನ್ನು ಕೋರ್ಟಿಗೆ ಹಾಜರ ಮಾಡಲಿಕ್ಕೆ ಸಾಧ್ಯೆನಾ ನಿಮಗೆ? ಎಂದು ನ್ಯಾಯಾಧೀಶರು ಕೇಳಿದರು.
ಖಂಡಿತ ಮಾಡ್ತೇನ್ರಿ ಸರ್ ಎಂದು ರಾಮನಾಥ ಹೇಳಿದರು.
ನಿಗದಿತ ದಿನದಂದು, ನಿಖರವಾಗಿ ನ್ಯಾಯಾಧೀಶರ ಕೇಳಿದಷ್ಟನ್ನು ಸ್ನೇಹಿತರು ಬರೆದ ಪತ್ರಗಳನ್ನು, ಕಳಿಸಿದ ಲಗ್ನ ಪತ್ರಿಕೆಗಳನ್ನು ತಂದು ಕೋರ್ಟ್ ಮುಂದೆ ಹಾಜರಪಡಿಸಿದ. ಅದನ್ನು ಪರಿಶೀಲಿಸಿದ ನ್ಯಾಯಾಧೀಶರು, ಎಲ್ಲ ಪತ್ರಗಳು ಸರಿಯಾಗಿವೆ. ಈಗ ನೀವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಾಜರ ಪಡಿಸಿರುವ ಲಗ್ನ ಪತ್ರವನ್ನು ಸಾಕ್ಷಿ ಎಂದು ಕೋರ್ಟ್ ಪರಿಗಣಿಸುತ್ತಿದೆ ಎಂದರು.
ಮುಂದೆ ಮಹಿಳೆ ಪರ ಕೋರ್ಟ್ ತೀರ್ಪು ನೀಡಿತು. ಅದರಲ್ಲಿ ಆ ಮಹಿಳೆ ಪತಿಯ ಆಸ್ತಿ ಪಡೆಯಲು ಅರ್ಹತೆ ಹೊಂದಿದ್ದಾಳೆ. ಅವಳ ಪಾಲಿನ ಆಸ್ತಿಯನ್ನು ಪತಿಯ ಮನೆಯವರು ಕೊಡಬೇಕು ಎಂದು ಹೇಳಲಾಗಿತ್ತು.
ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಚಿಂತಾಕ್ರಾಂತಳಾಗಿ ಕುಳಿತಿದ್ದ ಮಹಿಳೆಯ ಮೊಗದಲ್ಲಿ ಜೀವಕಳೆ ಇಣಿಕಿ ಕಣ್ಣು ಮಿಟಿಕಿತು.
ಇದು ಕತೆ ಅಲ್ಲ. ಈಗ್ಗೆ ಕೆಲವು ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಪ್ರಮುಖ ನಗರದ ಒಂದು ಕೋರ್ಟ್‌ನಲ್ಲಿ ನಡೆದ ಘಟನೆ. ಹವ್ಯಾಸವೂ ಹರ್ಷ ತಂದೀತು ಎಂಬುದಕ್ಕೆ ಇದು ಒಂದು ಸಾಕ್ಷಿ.
ಆ ಮಹಿಳೆ ಉನ್ನತ ಶಿಕ್ಷಣ ಪಡೆದವಳು. ಸ್ವಂತ ಉದ್ಯೋಗ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹ ಆಗಿದ್ದಳು. ಮದುವೆಯಾದ ಎರಡೇ ವರ್ಷದಲ್ಲಿ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಳು. ಎರಡು ವರ್ಷ ಜೀವನ ನಡೆಸಿದ ನಂತರವೂ ಅವಳ ಬಳಿ ಪತಿಯ ಜೊತೆ ಇದ್ದ ಒಂದೇ ಒಂದು ಫೋಟೋ ಇಟ್ಟುಕೊಂಡಿರಲಿಲ್ಲ. ಲಗ್ನಪತ್ರ ಇದ್ದರೂ ಅದು ಪತಿಯ ಮನೆಯವರ ಬಳಿ ಇತ್ತು. ಅವರಿಬ್ಬರ ಸಾಕ್ಷಿಯಾಗಿ ಒಂದು ಮಗು ಕೂಡಾ ಇರಲಿಲ್ಲ. ಹೀಗೆ ಅವಳು ಬರಿಗೈಲೆ ಇದ್ದಳು. ಆಸ್ತಿ ಕೇಳುವ ಅನಿವಾರ್ಯತೆ ಅವಳಿಗೆ ಬಂದಾಗ ಅವಳ ನೆರವಿಗೆ ಬಂದದ್ದು ಕೇವಲ ಒಂದು ಲಗ್ನ ಪತ್ರ. ಅದು ಅವಳ ಹಕ್ಕಿನ ಸಾಕ್ಷಿಯಾಗಿ ನಿಂತಿತು. ಪತಿಯ ಮನೆಯಿಂದ ಅವಳಿಗೆ ಸಿಗಬೇಕಾದ ನ್ಯಾಯಯುತ ಆಸ್ತಿ ಪಾಲು ಸಿಕ್ಕಿತು. ಅದು ಅವಳ ಜೀವನಕ್ಕೆ ಆಸರೆಯಾಯಿತು.
ಟಿ ನಡೆದದ್ದು ಇಷ್ಟೇ:ತೀರಾ ಚಿಕ್ಕ ವಯಸ್ಸಿನಲ್ಲೇ ಪತಿ ಕಳೆದುಕೊಂಡ ಅವಳಿಗೆ ಆ ಕ್ಷಣಕ್ಕೆ ಅತ್ತೆ-ಮಾವರ ಮನೆಗಿಂತ ಅಪ್ಪ-ಅಮ್ಮನ ಮನೆ ಸುರಕ್ಷೆ ಅನಿಸಿತು. ಅಲ್ಲೇ ವಾಸವಾಗಿದ್ದಳು. ಮುಂದೆ ಕೆಲ ವರ್ಷಗಳ ನಂತರ ತಂದೆ-ತಾಯಿಗೆ ವಯಸ್ಸಾದ ನಂತರ, ಅಣ್ಣಂದಿರ ಹೆಂಡಂದಿರ ಕಿರಿಕಿರಿ ಆರಂಭವಾಯಿತು. ಆಗ ಅವಳಿಗೆ ತವರು ಬೇಸರವಾಯಿತು. ಪತಿ ಮನೆ ಒಂದೇ ಗತಿ. ಆದರೆ ಪತಿ ತೀರಿಕೊಂಡ ನಂತರ ಒಂದೇ ಒಂದು ಬಾರಿ ಅವಳು ಪತಿಯ ಮನೆಗೆ ಹೋಗಿಬಂದವಳಲ್ಲ. ಅವರ ಸಂಪರ್ಕವೇ ಕಡಿದುಹೋಗಿತ್ತು. ಆದರೆ ಇಷ್ಟು ವರ್ಷಗಳ ನಂತರ ಈಗ ಅಲ್ಲಿ ಹೋದರೆ ನನ್ನನ್ನು ಅವರು ಹೇಗೆ ಸ್ವೀಕರಿಸಿಯಾರು? ಎಂಬ ಮಾನಸಿಕ ಹೋಯ್ದಾಟದಲ್ಲಿ ಒಂದು ನಿರ್ಣಯಕ್ಕೆ ಬಂದಳು. ತನ್ನ ಪತಿಗೆ ಬರಬೇಕಾದ ಆಸ್ತಿ ಪಡೆದು ಪ್ರತ್ಯೇಕವಾಗಿ ಜೀವನ ನಡೆಸುವುದೇ ಸೂಕ್ತ ಎಂದು. ಅಸ್ತಿ ಕೇಳಿ ಕೋರ್ಟ್‌ನಲ್ಲಿ ದಾವೆ ಹೂಡಿದಳು. ಆಗ ಅವಳು ಪತಿಯ ಆಸ್ತಿಗೆ ಹಕ್ಕುದಾರಳು ಎಂದು ಒಂದೇ ಒಂದು ಸಾಕ್ಷಿ ಇಲ್ಲದೇ ಪೇಚಾಡುತ್ತಿದ್ದಳು. ಮದುವೆಯಾಗಿ ಎರಡು ವರ್ಷ ಜೀವನ ನಡೆಸಿದರೂ ಮಗು ಕೂಡಾ ಆಗಿರಲಿಲ್ಲ. ಮಗು ಇದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಹೀಗೆ ಯಾವುದೇ ಸಾಕ್ಷಿ ಇಲ್ಲದ ಪರಿಸ್ಥಿತಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಇನ್ನೇನು ಇತ್ಯರ್ಥ ಆಗುತ್ತದೆ. ಆಸ್ತಿ ಸಿಗುವುದಿಲ್ಲ. ಪತಿ ಸತ್ತಾಗಲೇ ಎಂತಹದೇ ಕಷ್ಟಗಳು ಎದುರಾಗಿದ್ದರೂ ಅಲ್ಲೇ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಚಿಂತಾಕ್ರಾಂತಳಾಗಿದ್ದಾಗ ಅವಳಿಗೆ ಆಕಸ್ಮಿಕವಾಗಿ ಅವಳ ತಂದೆಗೆ ಪರಿಚಿತರಾದ ರಾಮನಾಥ ಬನಶಂಕರಿ ಅವರು ಹೀಗೆ ಯಾವುದೋ ಒಂದು ಪ್ರಸಂಗದಲ್ಲಿ ಹಳ್ಳಿಯೊಂದರಲ್ಲಿ ಭೇಟಿಯಾದರು. ಆಗ ಔಪಚಾರಿಕವಾಗಿ ಮಾತನಾಡುತ್ತ, ತನ್ನ ಕಷ್ಟ ಹೇಳಿಕೊಂಡಳು. ಆಗ ಅವರು ತನ್ನ ಬಳಿ ಅವಳ ಲಗ್ನದ ವೇಳೆಯಲ್ಲಿ ಅವಳ ತಂದೆಯವರು ಕಳಿಸಿದ್ದ ಲಗ್ನಪತ್ರಿಕೆ ಇದೆ ಎಂದು ಹೇಳಿದರು. ಆ ಸುದ್ದಿ ಕೇಳಿ ಅವಳಿಗೆ ಹೋದ ಜೀವ ಬಂದಂತಾಯಿತು. ಅವಳು ತೀರ ದಯನೀಯವಾಗಿ ಕೇಳಿಕೊಂಡಳು. ಆ ಲಗ್ನಪತ್ರ ತಂದು ಕೊಡಿ, ಕೋರ್ಟ್‌ಲ್ಲಿ ಹಾಜರ ಪಡಿಸಿ ನನ್ನ ಪಾಲಿಗೆ ಬರಬೇಕಾದ ಆಸ್ತಿಯನ್ನು ಪಡೆದು ಸ್ವತಂತ್ರ ಜೀವನ ನಡೆಸುತ್ತೇನೆ ಎಂದಳು. ರಾಮನಾಥ ಅವರು ಒಪ್ಪಿ, ಅವಳಿಗೆ ಲಗ್ನ ಪತ್ರದ ಪ್ರತಿಯನ್ನು ತಂದು ಕೊಟ್ಟರು. ಕೋರ್ಟ್‌ನಲ್ಲಿ ಹಾಜರಪಡಿಸಿದ್ದರು.
ಹೀಗೆ ಒಂದು ಲಗ್ನ ಪತ್ರಿಕೆ ಒಬ್ಬ ಮಹಿಳೆಗೆ ಕೋರ್ಟ್‌ನಲ್ಲಿ ನ್ಯಾಯ ಕೊಡಿಸಲು ಸಾಕ್ಷಿಯಾಯಿತು.
ಈ ಲಗ್ನ ಪತ್ರವನ್ನು ಸಂಗ್ರಹಿಸಿ ಇಟ್ಟ ರಾಮನಾಥ ಅವರು ಮುಂದೊಂದು ದಿನ ಅದು ಇಂತಹ ಮಹತ್ವದ ಸಹಾಯಕ್ಕೆ ಸಾಕ್ಷಿಯಾಗಬಹುದು ಎಂದು ಸಂಗ್ರಹಿಸಿ ಇಟ್ಟವರಲ್ಲ. ಕೇವಲ ಪತ್ರಗಳನ್ನು ಸಂಗ್ರಹಿಸುವ ಹವ್ಯಾಸ ಅಷ್ಟೇ. ಇವರ ಬಳಿ ಸಾವಿರಾರು ಇಂತಹ ಪತ್ರಗಳು ಇವೆ. ಅವುಗಳಲ್ಲಿ ಸ್ನೇಹಿತರು, ಸಂಬಂಧಿಕರು ಬರೆದ ಪತ್ರಗಳು, ಲಗ್ನ ಪತ್ರಗಳು, ಮಕ್ಕಳು ಹುಟ್ಟಿದ ಸಂತೋಷದ ಸಮಾಚಾರ ತಿಳಿಸಿದ ಪತ್ರಗಳು, ನಿಧನ ವಾರ್ತೆ ಹೊತ್ತು ತಂದ ಪತ್ರಗಳು. ಗೃಹ ಪ್ರವೇಶ ಆಮಂತ್ರಣ ಪತ್ರಗಳು ಹೀಗೆ ಹಲವಾರು ವಿಧದ ಪತ್ರಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಅವರು ಬರೀ ಪತ್ರಗಳನ್ನು ಅಷ್ಟೇ ಸಂಗ್ರಹಿಸಿಲ್ಲ. ಅಂಚೆ ಚೀಟಿ, ಕಲಾತ್ಮಕವಾದ ಕ್ಯಾಲೆಂಡರ್‌ಗಳನ್ನು, ಅಪರೂಪದ ಭಾವಚಿತ್ರಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ವೃತ್ತಿಯಿಂದ ಅವರು ಒಬ್ಬ ಸರಕಾರಿ ನೌಕರರು.

ಮೈಲಿಗೆಯಲ್ಲಿ ಮಮತೆ ಜಿನುಗಿದಾಗ....

ಗೋವಿಂದ ಮಡಿವಾಳರ

ನಾನೊಂದು ಮರವಾಗಿದ್ದರೆ
ಹಕ್ಕಿ ಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ
ಬಿಸಿಲು ನನ್ನ ಅಪ್ಪಿಕೊಂಡಾಗ
ನೆರಳಿಗಾಗುತ್ತಿರಲಿಲ್ಲ ಮೈಲಿಗೆ....
ಇದು ಮಾಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಯೊಂದರ ಮೊದಲ ಎರಡು ಪ್ಯಾರಾ. ಈ ಕವಿತೆ ಓದಿದಾಗ ನನಗೆ ನನ್ನ ಕಾಲೇಜು ದಿನಗಳಲ್ಲಿ ಪರಿಚಯವಾದ ಒಂದು ಕುಟುಂಬದ ನೆನಪಾಯಿತು.
ಅದೊಂದು ವೈಷ್ಣವ ಸಂಪ್ರದಾಯ ಮನೆ. ಆ ಮನೆಯಲ್ಲಿ ಸುಮಾರು ೬೦ರ ಆಸುಪಾಸಿನ ವಯಸ್ಸಿನ ಅಜ್ಜಿ. ಸದಾ ಸೀರೆ ಉಟ್ಟು ಕಚ್ಚೆ ಹಾಕಿರುತ್ತಿದ್ದರು. ವೈಷ್ಣವ ಸಂಪ್ರದಾಯ ಅಂದರೆ ಕೇಳಬೇಕೆ.ಪೂಜೆ, ವೃತ ಎಲ್ಲವೂ ನಿಯಮಿತವಾಗಿ ನಡೆಯಲೇ ಬೇಕು. ಇಂತಹ ಮಹಿಳೆಯ ಮಗನೊಬ್ಬ ಕಾಲೇಜು ದಿನಗಳಲ್ಲಿ ನನಗೆ ಗ್ರಂಥಾಲಯದಲ್ಲಿ ಪರಿಚಯವಾದ. ಆತನ ಪರಿಚಯ, ಸ್ನೇಹ ಮುಂದೆ ಆತ್ಮೀಯತೆಗೆ ತಿರುಗಿತು. ಅವರು ಮನೆಗೆ ಆಗಾಗ ಹೋಗಿ ಬರುತ್ತಿದ್ದೆ. ಆಗ ಅವರ ತಾಯಿಯ ಪರಿಚಯವೂ ಆಯಿತು.
ದೂರದ ಹಳ್ಳಿಯಿಂದ ಶಿಕ್ಷಣಕ್ಕೆಂದೇ ನಾನು ಧಾರವಾಡದಂತಹ ನಗರಕ್ಕೆ ಬಂದವನು. ಬಾಡಿಗೆ ರೂಮಿನಲ್ಲಿದ್ದು ಸ್ವತಃ ಅಡಿಗೆ ಮಾಡಿಕೊಂಡು ಊಟ ಮಾಡಿ ಶಿಕ್ಷಣ ಪಡೆಯುತ್ತಿದ್ದೆ. ಇದು ಅವರಿಗೆ ಗೊತ್ತಿತ್ತು. ಹೀಗಾಗಿ ಅವರು ಹಬ್ಬದ ದಿನಗಳಲ್ಲಿ ಊಟಕ್ಕೆ ಹೇಳುತ್ತಿದ್ದರು. ಒತ್ತಾಯದ ಮೇರೆಗೆ ಊಟಕ್ಕೆ ಹೋಗುತ್ತಿದ್ದೆ. ಆ ತಾಯಿ ತೀರಾ ಮಡಿವಂತರು. ಊಟಕ್ಕೆ ಕೊಡುವಾಗ ಊಟದ ತಾಟನ್ನು ದೂರದಿಂದಲೇ ನನ್ನತ್ತ ನೂಕುತ್ತಿದ್ದರು. ಏನಾದರು ಪ್ರಸಾದ ಕೊಡುವದಿದ್ದರೆ ನನ್ನ ಕೈಗೆ ತಾಗಿದ ಗಾಳಿ ಕೂಡಾ ಅವರಿಗೆ ಸೋಂಕಬಾರದು ಎಂಬ ರೀತಿಯಲ್ಲಿ ಕೈ ಎತ್ತರಿಸಿ ಹಾಕುತ್ತಿದ್ದರು. ನಾನು ಕೂಡಾ ಸಂಕೋಚವಿಲ್ಲದೇ ಕೈ ಒಡ್ಡಿ ಸ್ವೀಕರಿಸುತ್ತಿದ್ದೆ. ಅವರು ಹಾಗೆ ಹಾಕುವಾಗಲೆಲ್ಲ ನನಗೆ ಒಳಗೊಳಗೆ ನಗು, ಕೋಪ ಒಟ್ಟೊಟ್ಟಿಗೆ ಬರುತ್ತಿತ್ತು. ಆದರೂ ನಾನು ಆ ಬಗ್ಗೆ ಪ್ರತಿಭಟಿಸಲಿಲ್ಲ. ಯಾಕಂತ ನನಗೆ ಇಂದಿಗೂ ಜಿಜ್ಞಾಸೆ.
ಹೀಗೆ ದಿನಗಳು ಉರುಳಿದಾಗ ನಾನು ಅವರ ಮಗನ ಜೊತೆ ಪ್ರತಿ ಭಾನುವಾರ ಮನೆಗೆ ಹೋಗದಿದ್ದರೆ,ಯಾಕೆ ಆ ಹುಡುಗ ಇವತ್ತು ಮನೆಗೆ ಬಂದಿಲ್ಲ?, ನಿನಗೆ ಭೇಟಿ ಆಗಿಲ್ಲೇನು? ಎಂದು ಪ್ರಶ್ನಿಸುತ್ತಿದ್ದರಂತೆ.
ಭಾನುವಾರದ ಮರುದಿನ ಗ್ರಂಥಾಲಯದಲ್ಲಿ ಸಿಗುತ್ತಿದ್ದ ಸ್ನೇಹಿತ, ಏ ಮಹಾರಾಯ ಮನೆಯಾಗ ಅಮ್ಮಾ ಕೇಳುತ್ತಿದ್ದಳು. ನೀನು ಭಾನುವಾರ ಮನೆಗೆ ಬಾರದಿದ್ದರೆ ಯಾಕ ಬಂದಿಲ್ಲ ಅಂತಾ. ಬಂದು ಹೋಗು ಎಂದು ಹೇಳುತ್ತಿದ್ದರು. ಮರು ದಿನ ಮನೆಗೆ ಹೋದರೆ, ಏನೋ ಮಹಾಶಯ ನೀನು ಭಾನುವಾರ ಮನೆಗೆ ಬಾರದಷ್ಟು ಕೆಲಸ ಒಟ್ಟಿತ್ತೇನು? ಮಬ್ಬ, ಹಂಗ ತಪ್ಪಿಸಬಾರದು ಎಂದು ತಾಕೀತು ಮಾಡುತ್ತಿದ್ದರು. ಕುಂತ್ಗೋ ಎಂದು ಹೇಳಿ ಮನೆಯಲ್ಲಿ ಮಾಡಿಟ್ಟಿದ್ದ ಬೇಸೆನ್ ಉಂಡಿ ತಂದು ಕೈ ಮೇಲೆತ್ತಿ ನನ್ನ ಕೈಗೆ ಹಾಕುತ್ತಿದ್ದರು. ಇಲ್ಲವೇ ಒಂದು ಚಿಕ್ಕದಾದ ಪ್ಲೇಟಿನಲ್ಲಿ ಇಟ್ಟು ದೂರದಲ್ಲೇ ಕುಳಿತು ಪ್ಲೇಟನ್ನು ನನ್ನತ್ತ ನೂಕುತ್ತಿದ್ದರು. ಆಗ ನಾನು ಖುಷಿಯಿಂದಲೇ ತೆಗೆದುಕೊಂಡು ತಿನ್ನುತ್ತಿದ್ದೆ. ಮನೆಗೆ ಹೊರಟು ನಿಂತಾಗ, ಆಗಾಗ ಬರ್ತಾ ಇರು ಎಂದು ಹೇಳುತ್ತಿದ್ದರು. ಆಗ... ನನಗೆ ಒಂದು ರೀತಿ ನನ್ನ ಪಾಲಕರು, ನಾನು ನನ್ನೂರಿನಿಂದ ಧಾರವಾಡಕ್ಕೆ ಹೊರಟು ನಿಂತಾಗ ಹೇಳುತ್ತಿದ್ದದ್ದು ನೆನಪಾಗುತ್ತಿತ್ತು. ಹೀಗೆ ಅವರಲ್ಲಿ ನನ್ನ ಪಾಲಕರನ್ನು ಕಾಣಲಾರಂಭಿಸಿದೆ. ಅದಕ್ಕಾಗಿಯೋ ಏನೋ. ನನ್ನ ಕೈ ಗಾಳಿ ತಾಗಿದರೂ ಮೈಲಿಗೆ ಆಗುತ್ತದೆ ಎಂದು ಎಚ್ಚರ ವಹಿಸಿಕೊಂಡರೂ ನನಗೆ ಅದು ಅವಮಾನ ಅನ್ನಿಸಲೇ ಇಲ್ಲ. ಅಲ್ಲಿ ಜಾತಿಗಿಂತ ಮಮತೆ ಪ್ರಬಲವಾಯಿತೋ ಏನೋ ಎಂದು ಅನಿಸುತ್ತದೆ. ನನ್ನ ಬಂಡಾಯದ ಮನಸ್ಸು ತಣ್ಣಗೆ ಇರುತ್ತಿತ್ತು. ಅದಕ್ಕೆ ಅಂತಾ ಕಾಣಿಸುತ್ತದೆ ಮಮತೆ ಮುಂದೆ ಜಾತಿ ಫೇಲು ಅಂತಾ.
ಒಂದು ದಿನ ಹೀಗೆ ಕುಳಿತಿದ್ದಾಗ, ಆ ಗೆಳೆಯ ನನ್ನ ತಾಯಿ ನಿನಗೆ ಊಟಕ್ಕೆ ನೀಡುವ ರೀತಿ ಬೇಸರ ತರುತ್ತಿರಬೇಕು ಅಲ್ವ. ಖಂಡಿತ ನಿನಗೆ ಆಗೇ ಆಗುತ್ತದೆ. ನನಗೆ ಗೊತ್ತು. ಆದರೂ ನೀನು ಲಕ್ಕಿ ಕಣೋ ಎಂದು ಹೇಳಿ ದೀರ್ಘ ನಿಟ್ಟಿಸುರಿ ಬಿಟ್ಟ..... ನೀನು ಎಂದಾದರು ಗಮನಿಸಿಯಾ ನನ್ನ ತಾಯಿ ನನ್ನ ಪಕ್ಕದಲ್ಲಿ ಕುಳಿತ ಮಾತನಾಡುವುದು, ಅಥವಾ ನಾನು ಅವಳ ಬಳಿ ನಿಂತು ಮಾತನಾಡುವುದು. ನಾನು ಎಲ್ಲರೊಂದಿಗೆ ಬೆರೆತು ಒಡಾಡುವುದರಿಂದ ನನ್ನನ್ನು ನನ್ನ ತಾಯಿ ತನ್ನ ಹತ್ತಿರ ಬರಿಸಿಕೊಳ್ಳುವುದಿಲ್ಲ. ನನ್ನ ಬಟ್ಟೆ ಕೂಡಾ ತೊಳೆಯುವುದಿಲ್ಲ. ನನ್ನ ವೈನಿ ಬಂದ ಮೇಲೆ ಅವರೇ ನನಗೆ ಊಟಕ್ಕೆ ಹಾಕುತ್ತಾರೆ.ಬಟ್ಟೆ ತೊಳೆದುಕೊಡುತ್ತಾರೆ. ಹತ್ತಿರ ಹೋದರೆ ನಮ್ಮ ತಾಯಿ ಸರದ ನಿಲ್ಲೋ ಆ ಕಡೆ ಅಂತಾ ಹೇಳ್ತಾರ. ಅಷ್ಟೊಂದು ಕಟ್ಟುನಿಟ್ಟಿನ ವೃತ ಅವರದು. ಅದಕ್ಕೆ ಬೇಜಾರ ಮಾಡಿಕೋ ಬೇಡ ಅಂತಾ ಸಮಾಧಾನ ಪಡಿಸಿದ.
ಹೋಗಲಿ ಬಿಡು. ಅಮ್ಮನ ಸ್ಥಾನದಲ್ಲಿ ಅತ್ತಿಗೆ ಇದ್ದಾಳಲ್ಲ ಎಂದು ಸಮಾಧಾನ ಮಾಡಿದೆ.
ಹಾಗಲ್ಲೋ, ನೀನು ವಾರದಲ್ಲಿ ಒಂದು ದಿನ ಬಾರದಿದ್ದರೆ ಚಡಪಡಿಸುತ್ತಾರೆ. ಬಂದಕೂಡಲೇ ಉಪಚಾರ ಮಾಡುತ್ತಾರೆ. ಓದು ಅಂತಾರ. ನನ್ನ ಬಗ್ಗೆ ಕಾಳಜಿನ ಮಾಡೋದಿಲ್ಲ. ಆದರೂ ಅವರು ನನ್ನ ತಾಯಿ. ಅವರು ಇನ್ನೊಬ್ಬರನ್ನು ಗೌರವಿಸುವ ರೀತಿ ಐತಲ್ಲ ಅದು ನನಗೆ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ ಎಂದ.
ಅಷ್ಟೆಲ್ಲ ಮಾತಾಡಿದ ನಂತರ ನನಗೆ ಏನೂ ಹೆಚ್ಚು ಮಾತಾಡಲು ಮನಸ್ಸಾಗಲಿಲ್ಲ. ಸುಮ್ಮನೆ ಆತನ ಕೈಯನ್ನು ನನ್ನ ಕೈಗೆ ತೆಗೆದುಕೊಂಡು ಅದುಮಿ ಕೈ ತಟ್ಟಿ ತರಗತಿ ಕಡೆಗೆ ಹೋದೆ. ನಂತರ ನನ್ನ ರೂಮಿಗೆ ಬಂದ ಮೇಲೆ ಅವನ ಮಾತುಗಳೇ ಮನಸ್ಸಿನಲ್ಲಿ ಗಿರಕಿ ಹೊಡೆಯಲಾರಂಭಿಸಿದವು.
ಅವರಿಗೆ ನಾನು ಮಗನಲ್ಲಿ, ಬಳಗದವನಲ್ಲ. ಆದರೂ ಅವರು ಅಷ್ಟೊಂದು ಪ್ರೀತಿ ತೋರಿಸುತ್ತಿದ್ದಾರಲ್ಲ ಅದು ಮುಖ್ಯ ಅನಿಸಿತು.
ಪ್ರತಿಯೊಬ್ಬನಿಗೆ ಆತ ನಂಬಿದ, ವಿಶ್ವಾಸದ ವಿಚಾರಗಳನ್ನು ಇದ್ದಕ್ಕಿದ್ದಂತೆ ಬಿಟ್ಟುಬಿಡು, ನಮ್ಹಂಗೆ ಇರು ಎಂದು ಹೇಳುವುದು ಸುಲಭ. ಆದರೆ ಅವರಿಗೆ ಅದು ಅಷ್ಟು ಸುಲಭ ಅಲ್ಲ. ಆದರೂ ನಾವು ಪರಸ್ಪರ ಆಸ್ಪೃಶ್ಯತೆ, ದ್ವೇಷದ ಗಡಿ ದಾಟಿದಾಗಲೇ ಪ್ರೀತಿಯ ಅನುಭವ ಆಗ್ತದ.
ಪ್ರೀತಿ, ವಿಶ್ವಾಸ, ಮಮತೆ ಮುಂದೆ ಜಾತಿ ವ್ಯವಸ್ಥೆ ಗೌಣ ಅನ್ನುವುದನ್ನು ಅವರು ತಣ್ಣಗೆ ನನಗೆ ಪಾಠ ಮಾಡಿದ ಮೇಸ್ಟ್ರು ಅನಿಸುತ್ತದೆ. ಅಂತಹವರ ಸಾಮಿಪ್ಯ ನನ್ನನ್ನು ಜಾತಿ ಸೋಂಕಿನಿಂದ ದೂರ ಇಟ್ಟಿದೆ ಅನಿಸುತ್ತದೆ.
ಅವರು ಜಾತಿ ಶ್ರೇಣಿಕರಣೆಯನ್ನು ಧಿಕ್ಕರಿಸಿ ನನಗೆ ಮಮತೆ ತೋರಿಸಿದ್ದರಲ್ಲ ಅದು ನಿಜವಾದ ಬಂಡಾಯ ಅಂತಾ ನನಗೆ ಇಂದಿಗೂ ಅನಿಸುತ್ತದೆ. ಅವರ ಮುಂದೆ ನಾನು ಗೌರವಿಸುವ ಸಾಮಾಜವಾದ ಏನೂ ಅಲ್ಲ. ಅಂತಹವರ ಇರಬೇಕು ನಮ್ಮ ಮಧ್ಯೆ ಅನಿಸುತ್ತದೆ. ಇಂದು ಅವರು ನಮ್ಮ ಮಧ್ಯೆ ಇಲ್ಲದಿದ್ದರೂ, ಜಾತಿ ಪ್ರಶ್ನೆ ಬಂದಾಗಲೆಲ್ಲ ಅವರು ನನ್ನ ನೆತ್ತೆ ಸವರಿದಂತೆ ಆಗುತ್ತದೆ.