ಎಚ್.ಗೋಪಿಕಾ(ಗೋವಿಂದ ಮಡಿವಾಳರ)
ಶಾರದಿ ಇವತ್ತು ಏನಾತು ಅಂದ್ರೆ...
ನನ್ಮಗಳು ಗೌರಿ ಇದ್ದಾಳಲ್ಲ. ಸ್ಕೂಟರ್ ತಂದು ಮನೆಮುಂದ ನಿಲ್ಲಿಸಿ ಅಮ್ಮ ಬೇಗೆ ರೇಡಿಯಾಗು ದೇವಸ್ಥಾನಕ್ಕೆ ಹೋಗೋಣ ಅಂದ್ಲು. ಜೀವನದಲ್ಲಿ ಪ್ರಥಮ ಬಾರಿಗೆ ಇಂತಹ ಒಂದು ಮಾತು ಕೇಳಿ ಅದೆಂತಹ ಖುಷಿ ಅಯಿತು ಅಂತಿಯಾ?...
ಮೆಂತೆಪಲ್ಲೆ ಸೋಸುವುದನ್ನು ಬಿಟ್ಟು ಸರ ಸರಾಂತ ಮನೆತುಂಬಾ ಓಡಾಡಿ ತಯಾರಾದೆ. ಇವರು ಕಂಪ್ಯೂಟರ್ ಮುಂದೆ ಕೂತು ಅದೇನೋ ಟೈಪ್ ಮಾಡ್ತಾ ಇದ್ದರು. ದೇವಸ್ಥಾನಕ್ಕೆ ಹೋಗ ಬರ್ತೇನ್ರಿ, ಮನೆಕಡೆ ಜೋಕಿ, ಜಿಮ್ಮಿ ಬಾಗಲದಾಗ ಮಲಗೇತಿ ಎಂದು ಹೇಳುತ್ತಾ ಅವರ ಅನುಮತಿಗೂ ಕಾಯದೇ ಮಗಳೊಂದಿಗೆ ಮನೆ ಗೇಟ್ ತಡಾದು ರಸ್ತೆಗೆ ಬಂದು ಸ್ಕೂಟರ್ ಸೀಟು ತಡವುತ್ತ ನಿಂತೆ....
ಮಗಳು ‘ಯವ್ವಾ ಬೇ’ ಗಾಡಿ ಹತ್ತಬೇ ಎಂದಾಗ, ಸ್ಕೂಟರ್ ಆಗಲೇ ಚಾಲು ಆಗಿತ್ತು. ಹತ್ತಿ ಕುಳಿತೆ. ಮಗಳು ನನ್ನ ಕೈ, ತನ್ನ ಹೆಗಲ ಮೇಲೆ ಇಟ್ಕೊಂಟು ಗಾಡಿ ಹೊಡೆಯುತ್ತಿರುವಾಗ ನಮ್ಮ ಗೌರಿ ನನಗ ಪೈಲಟ್ ತರಹ ಕಂಡಳು. ಖರೆ ಖರೆ ಹೇಳಬೇಕಂದ್ರ ಅಲ್ಲಿ ತಾಯ್ತನದ ಸ್ಪರ್ಷ ಅದ್ಹಾಂಗ ಆತು. ಮಗುವಿನ ತರಹ ಹಾಗೇ ಕುಳಿತೆ. ಅಷ್ಟು ಜನ ಗಂಡ್ಸೂರು ಗಾಡಿ ಓಡಿಸುವ ಮಧ್ಯೆ ಗೌರಿ ಗಾಡಿನ.. ಜೋರದ ಅನಿಸ್ತು ನೋಡು. ದೇವಸ್ಥಾನದ ಬಳಿ ಗಾಡಿ ನಿಂತಾಗ ಗಾಡಿಯಿಂದ ಇಳಿದ ಮಗಳ ಕೈ ಕೈಯಾಗ ತಗೊಂಡು ಸಣ್ಣಗ ಅದುಮಿ ಕೃತಜ್ಞತೆ ಸಲ್ಲಿಸಿದೆ.
ನನ್ನ ಮಗ ರವಿ ಎಂದೂ ಒಂದು ದಿನ ಹೀಂಗ ಸ್ಕೂಟರ್ ಮೇಲೆ ಕರದ ಕುಡ್ರಿಸಿಕೊಂಡು, ಆತ್ಮಿಯತೆಯಿಂದ ಕರಕೊಂಡು ಹೋದದ್ದು ನೆನಪೇ ಇಲ್ಲ. ಎಲ್ಲೆರ ಅರ್ಜೆಂಟ್ ಹೋಗದಿದ್ರ ಸ್ವಲ್ಪ ಗಾಡಿ ಮೇಲೆ ಬಿಟ್ಟು ಬಾರೋ ರವಿ ಅಂದ್ರ, ಅಮ್ಮ ನೀವು ಹೆಣ್ಮಕ್ಕಳು ಲಗೂನ ತಯಾರ ಆಗ್ಹೋಂಗಿಲ್ಲ. ನಾ ನನ್ನ ಫ್ರೆಂಡ್ಸ್ಗೆ ಬೇಗ ಬರ್ತೇನಿ ಅಂತಾ ಹೇಳೇನಿ ನೀನು ರಿಕ್ಷಾ ಮಾಡಿಕೊಂಡು ಹೋಗು ಅಂತಾ ಹೇಳ್ತಾನ. ತಾಯಿ ಮಾತಗಿಂತ ಗೆಳೆಯರ ಮಾತ ಜಾಸ್ತಿಯೇನೋ ಅಂತ ಗದರಿಸಿದ್ರ ಗೊಣಗಾಡಿಕ್ಕೊಂತ ಕರ್ಕೊಂಡು ಹೋಗ್ತಾನ. ಮರಳಿ ಬರಬೇಕಾದ್ರ ಮತ್ತ ನಾನು ಬಸ್ಸೋ, ರಿಕ್ಷಾದಾಗೋ ಬರಬೇಕು. ಗೌರಿ ಹಂಗಲ್ಲ. ಕರ್ಕೊಂಡು ಹೋಗಿ ನನ್ನ ಜತೆಗೆ ಕೆಲಸ ಮುಗಿಯುವ ತನಕ ಇದ್ದು ಜತನದಿಂದ ಕರಕೊಂಡು ಬರ್ತಾಳ.
ನೋಡೇ ಶಾರದಿ ನಾವು ಹತ್ತು ದೇವರಿಗೆ ಹರಕಿ ಹೊತ್ತ ಜನ್ಮ ನೀಡಿದ ಗಂಡಸು ಮಗನಿಗೂ, ಬೇಡದ ಮನಸಿನಿಂದ ಜನ್ಮ ನೀಡುವ ಹೆಣ್ಣು ಮಗುವಿಗೂ ಇರುವ ಅಂತರ. ನನಗ ಅನಸ್ತದ ಯಾತಕವ್ವ ಈ ಪರಿ ಗಂಡು ಸಂತಾನಕ್ಕೆ ಹಪಹಪಿ ಮಾಡೋದು ಅಂತಾ.
ಸ್ಕೂಟರ್ ಮೇಲೆ ಹತ್ತಿಸ್ಕೊಂಡು ಹೋದ ಕೂಡ್ಲೆ ಮಗಳ ಮೇಲೆ ಅಷ್ಟು ಪ್ರೀತಿ ಉಕ್ಕಿತಾ ಅಂತಾ ಅನ್ಕೋಬ್ಯಾಡ. ಅಕಿಗೆ ನೌಕರ ಸಿಕ್ಕಾಗನಿಂದ ನೋಡ್ತೇನಿ...
ಅವ್ವಾ ಇವತ್ತು ಸಂಜೆ ಸ್ವಲ್ಪ ಬೇಗ ಸಜ್ಜಾಗಿರು. ನಾನು ಬೇಗ ಬರ್ತೇನಿ. ಇಬ್ಬರು ದೇವಸ್ಥಾನಕ್ಕ ಹೋಗಿ ಹಂಗ ಬಜಾರದಾಗ ಅದೇನ ಹೇಳಿದ್ದೆಲ್ಲ ಅದನ್ನ ತರೋಣ ಅಂತಾ ಫೋನ್ ಮಾಡ್ತಾಳ. ಕರಕೊಂಡೂ ಹೋಗ್ತಾಳ. ಅವ್ವ ನಿನಗ ಈ ಕಾಟನ್ ಸೀರೆ ಮನ್ಯಾಗ ಉಟ್ಕಾಳಕ್ಕ ಛೋಲಾ ಆಗ್ತದಲ್ಲ ಅಂತಾ ಖರೀದಿ ಮಾಡ್ತಾಳ...
ಒಂದದಿನ ಏನಾಯ್ತಿ ಅಂದ್ರ. ಹೀಂಗ ಬಜಾರಕ್ಕ ಹೋದಾಗ ಒಂದು ಜಾಕೆಟ್ ಮತ್ತು ಮಾಪ್ಲರ್ ತಗೊಂಡ್ಲು. ಮನೆಗೆ ಬಂದು ಗಾರ್ಡನ್ನಾಗ ಹೂವಿನ ಗಿಡಕ್ಕ ನೀರು ಹಾಕುತ್ತಿದ್ದ ಅವರಪ್ಪನ್ನ ಒಳಗ ಕರೆದು ಪ್ಲ್ಯಾಸ್ಟಿಕ್ ಬ್ಯಾಗ್ ಕೈಗೆ ಕೊಟ್ಲು. ಅದನ್ನ ಬಿಚ್ಚಿನೋಡಿದವ್ರ, ‘ಪಾರ್ವತಿ ಪಡ್ಕೊಂಡ ಬಂದ ಪುಣ್ಯ ಅಂದ್ರ ಇದ ನೋಡ. ಇಂತಹ ಮಗಳ್ನ ಬೆಳಸಿದೆಲ್ಲಾ ನಿನಗ ತುಂಬಾ ಥ್ಯಾಂಕ್ಸ್, ಅಂತಾ ಹೇಳಿ ನನ್ನ ಮೂಗ ಜಗ್ಗಿದರು. ಗೌರಿ ಹೋ.. ಅಂತಾ ನಗೆಯಾಡಿದಳು. ನನಗರ ನಾಚಿಕ ಬಂದು ತಲೆ ತಗ್ಗಿಸಿದೆ.
ಮೊದಲ ಬಾರಿ ನೋಡಿದಾಗ ನೀ ಇಷ್ಟೊಂದು ನಾಚಿಕೊಂಡಿರ್ಲಿಲ್ಲ ನೋಡ್ ಪಾರ್ವತಿ. ಬಾಳ ಚಂದ ಕಾಣ್ತಿ ಅಂದಬಿಟ್ರು. ಇಂತಹ ಮಧುರ ಕ್ಷಣಗಳನ್ನು ಮೊಗ ಮೊಗದು ನೀಡುತ್ತಿರುವ ಮಗಳು ಗೌರಿಯಿಂದಾಗಿ ನನ್ನ ಆರೋಗ್ಯ ಕೂಡಾ ಸುಧಾರ್ಸೆದ.
ಆದ್ರ ಈ ಕ್ಷಣಗಳು ಕೊನೆ ತನಕ ಅಲ್ಲ ಅಂಬೋದು ಗೊತ್ತು. ಆಕೆ ಮದುವೆಯಾಗಿ ಗಂಡನ ಮನೆಗೆ ಹೋದ್ರ, ಇವೆಲ್ಲ ಬರೀ ನೆನೆಪು. ಆದ್ರ ನಮ್ಮ ಬದುಕಿನ ಬುತ್ತಿಯಲ್ಲಿ ಮಧುರ ಕ್ಷಣಗಳು ಇರ್ತಾವಲ್ಲ. ಆಗಾಗ ಬಿಚ್ಚಿ ಸವಿಯಬಹುದಲ್ಲ. ಈ ಬದುಕಿಗೊಂದಿಷ್ಟು ಇರಲಿ ಮಧುರ ಕ್ಷಣಗಳು ಅಂತಾರಲ್ಲ ಹಂಗವಾ.
ಶಾರದಿ ಇವ್ರು ಆಫೀಸಿನಿಂದ ಬಂದ್ಹಾಂಗ ಆತು ಚಹ ಮಾಡಬೇಕು. ನೀ ಬಿಡುವು ಮಾಡ್ಕೊಂಡು ಫೋನ್ ಮಾಡಲ್ಲ. ನಾ ಫೋನ್ ಬಂದ್ ಮಾಡ್ತೇನೆವಾ....
ಈ ಲೇಖನ ಕನ್ನಡಪ್ರಭ ಪತ್ರಿಕೆಯ ಸಖಿ ಪುರವಣಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರಕಟವಾಗಿದೆ.