Thursday, December 11, 2008

ಗಾಂಧೀಜಿ ಗಳಿಸಿದ್ದು......

  • ಗೋವಿಂದ ಮಡಿವಾಳರ

ಅವತ್ತು ಒಂದು ದಿನ ಮಧ್ಯೆ ರಾತ್ರಿ ನೀರವತೆಯಲಿ ನಗರದ ಐದು ಮೂರ್ತಿಗಳು ಒಂದು ಕಟ್ಟೆಯ ಮೇಲೆ ಕುಳಿತು ತಮ್ಮ ಸುಖ,ದುಃಖ ಹಂಚಿಕೊಳ್ಳಲಾರಂಭಿಸಿದವು.
ಜ್ಯೋತಿಬಾ ಹೇಳಿದರು,
ಕೊನೆಗೂ ನನ್ನ ಸೀಮಿತಗೊಳಿಸಿದ್ದಾರೆ ಮಾಳಿ ಜಾತಿಗೆ
ಛತ್ರಪತಿ ಶಿವಾಜಿ ಹೇಳಿದರು
ನಾನೋ ಬರೀ ಮರಾಠರವ
ಅಂಬೇಡ್ಕರ್ ಹೇಳಿದರು
ನಾನು ಬರೀ ಬೌದ್ಧರವ
ಹೇಳಿದರು ಟಿಳಕ
ಕರೆಯುತ್ತಾರೆ ನನ್ನನ್ನು ಬರೀ
ಚಿತ್ಪಾವನ ಬ್ರಾಹ್ಮಣನೆಂದು
ಗಾಂಧೀಜಿಗೆ ಮರಕಳಿಸಿತು ದುಃಖ
ಹೇಳಿದರು ಅವರು
ನೀವೆಲ್ಲ ಭಾಗ್ಯವಂತರು
ಒಂದಾದರು ಜಾತಿ ಇದೆ ನಿಮ್ಮ ಹಿಂದೆ
ನಿಮ್ಮನ್ನು ಸಮರ್ಥಿಸಲು
ಏನಿದೆ ನನ್ನ ಹಿಂದೆ?
ಸರ್ಕಾರಿ ಕಚೇರಿಗಳಲ್ಲಿನ ಖಾಲಿ ಗೋಡೆ.
ಇದು ಜ್ಞಾನಪೀಠ ಪ್ರಶಸ್ತಿ ವಿಜೇತ ಮರಾಠಿ ಕವಿ ಕುಸಮಾಗ್ರಜ ಅವರ ‘ಕಮಾಯಿ’(ಗಳಿಸು) ಕವಿತೆಯ ಸಾರ.
ಹೌದು ದೇಶದ ಯಾವುದೇ ಭಾಗದಲ್ಲಿ ಗಾಂಧೀಜಿ ಮೂರ್ತಿ ಭಗ್ನವಾದರೆ ಪ್ರತಿಭಟಿಸುವವರೇ ಇಲ್ಲ. ಅದನ್ನು ಸರಿಪಡಿಸಬೇಕಾದರೆ ಮತ್ತೆ ಬರಬೇಕು ಗಾಂಧಿ ಜಯಂತಿ ಅಥವಾ ಗಾಂಧೀಜಿ ಪುಣ್ಯತಿಥಿ ದಿನ. ಆಗ ಸರಕಾರಿ ಅಧಿಕಾರಿಗಳು ಸರಿಪಡಿಸುತ್ತಾರೆ. ಮತ್ತೆ ಎಲ್ಲರಿಗೂ ಬೇಕು ಪ್ರತಿಭಟಿಸಲು ಗಾಂಧಿ ಪುತ್ಥಳಿಯ ಇರುವ ಸ್ಥಳ. ಅವರ ಫೋಟೋ.
ಈಚೆಗೆ ಡೆನ್ಮಾರ್ಕ್ ದೇಶದ ಪತ್ರಿಕೆಯೊಂದರಲ್ಲಿ ಗಾಂಧೀಜಿ ಒಂದು ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಇನ್ನೊಂದು ಕೈಯಲ್ಲಿ ಮಾಂಸದ ಬರ್ಗರ್ ಬೇಯಿಸುತ್ತಿರುವ ಚಿತ್ರವನ್ನು ಪ್ರಕಟಿಸಿತ್ತು (ಈ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದೆ.) ಮದ್ಯ, ಮಾಂಸದಿಂದ ದೂರವಿದ್ದ ಗಾಂಧೀಜಿ ಕೈಯಲ್ಲಿ ಅವುಗಳನ್ನು ಕೊಟ್ಟರೆ ಗಾಂಧೀಜಿ ಹೇಗೆ ಕಾಣಬಹುದು ಎಂದು ಕಲಾವಿದ ಅಥವಾ ಪತ್ರಿಕೆಯ ಸಂಪಾದಕರು ನೋಡಲು ಪ್ರಯತ್ನಿಸಿರಬಹುದು. ಆದರೆ ಅಲ್ಲಿ ಕೂಡಾ ಕಲಾವಿದ ಗಾಂಧಿ ಜೊತೆ ಸೋತಿದ್ದಾನೆ ಎಂದೇ ಹೇಳಲು ಬೇಕು. ಚಿತ್ರ ಆಕರ್ಷಕವಾಗಿರಬೇಕು. ಆದರೆ ಅಲ್ಲಿ ಆಕರ್ಷಣೆ ಇಲ್ಲ. ಆಕರ್ಷಣೆ ಇಲ್ಲದ ಚಿತ್ರ ಅದು ಚಿತ್ರವಾಗಲಾರದು ಎಂಬುದು ನನ್ನ ಭಾವನೆ.
ಚಿತ್ರ ಪ್ರಕಟಿಸಿದ ಡೆನ್ಮಾರ್ಕ್‌ನ Morgenavisen jullands-Postenಪತ್ರಿಕೆಯ ಸಂಪಾದಕರಿಗೆ ಡೆನ್ಮಾರ್ಕನಲ್ಲಿ ಇರುವ ಭಾರತದ ರಾಯಭಾರಿ ಕಚೇರಿಯಿಂದ ಪ್ರತಿಭಟನೆ ಪತ್ರ ಬರೆಯಲಾಯಿತು. ಅದಕ್ಕೆ ಪತ್ರಿಕೆಯ ಸಂಪಾದಕ ಉತ್ತರ ಬರೆಯುತ್ತಾರೆ.We have chosen him with Nelson Mandela and the Dalai Lama as some of the new World history most beloved and respected people. yes indeed almost icons. This is a marketing campaign, which has just saluted the three men for their unique struggle for peace and freedom in the world.ಎಂದು ಹೇಳಿದ್ದಲ್ಲದೇ ಕ್ಷಮೆ ಕೋರುತ್ತಾರೆ. ಆದರೆ ಸಾಮಾನ್ಯ ಓದುಗರು ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರವನ್ನು ತಮಾಷೆಯಾಗಿ ಉಪಯೋಗಿಸುತ್ತಾರೆ ಎಂಬುದು ಪತ್ರಿಕೆಯ ಸಂಪಾದಕರ ಗಮನಕ್ಕೆ ಬರಬೇಕಾಗಿತ್ತು. ಅವರು ಅಷ್ಟು ಹೇಳಿಕೆ ಭಾರತದ ಪ್ರತಿಭಟನೆ ಪತ್ರಕ್ಕೆ ಫುಲ್ ಸ್ಟಾಪ್.
ಗಾಂಧೀಜಿ ಅವರು ಟೀಕೆಗೆ ಒಳಗಾದಷ್ಟು ಜಗತ್ತಿನ ಯಾವುದೇ ನಾಯಕ ಅಥವಾ ವ್ಯಕ್ತಿ ಆಗಿಲ್ಲ ಎಂಬುದು ನನ್ನ ತಿಳಿವಳಿಕೆ. ಗಾಂಧೀಜಿ ಟೀಕಿಸಲು ಅವರ ಮಗ ಹೀರಾಲಾಲ್‌ನ ಬದುಕಿನ ದುಸ್ಥರ ಘಟನೆಗಳನ್ನು ಬರೆದರು. ಬರೆಯುತ್ತ ಗಾಂಧೀಜಿಯಿಂದಾಗಿಯೇ ಇಂತಹ ಪರಿಸ್ಥಿತಿ ಮಗನಿಗೆ ಬಂದಿತು ಎಂತಲೂ ಬರೆದರು. ಆದರೆ ಗಾಂಧೀಜಿ ಇಲ್ಲಿ ಕೂಡಾ ಅವರ ಆರೋಪಗಳು ಮೈಗೆ ತಾಗದಂತೆ ನಿಲ್ಲುತ್ತಾರೆ. ಮಗ ಸ್ವಾವಲಂಬಿಯಾಗಲಿ ಎಂಬ ತಂದೆಯ ಆಶಯ ಅಪರಾಧ ಎಂದು ಯಾರೂ(ಲೇಖಕನ ಹೊರತಾಗಿ) ಒಪ್ಪಲಿಕ್ಕಿಲ್ಲ.
ಶುದ್ಧ ಶಾಖಾ ಆಹಾರಿ ಗಾಂಧೀಜಿ ಹೊರತುಪಡಿಸಿ ಬೇರೆ ಯಾರದೇ ಕೈಯಲ್ಲಿ ಬಿಯರ್ ಬಾಟಲಿ ಮತ್ತು ಮಾಂಸದ ಬರ್ಗರ್ ಬೇಯಿಸುವ ಚಿತ್ರ ಪ್ರಕಟಿಸಿದ್ದರೆ ಬೀದಿಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಗಾಂಧಿ ವಿಷಯದಲ್ಲಿ ನಡೆಯಲಿಲ್ಲ. ಇಷ್ಟೇ ಅಲ್ಲ ಭಾರತದಲ್ಲಿ ಗಾಂಧಿ ಪುತ್ಥಳಿಗೆ ಅವಮಾನ ಮಾಡಿದರೆ ಯಾರೂ ಚಕಾರವೆತ್ತುವದಿಲ್ಲ(ನಾನೂ ಸೇರಿದಂತೆ). ಗಾಂಧೀಜಿ ಕನ್ನಡಕ ಕಿತ್ತುಹಾಕಿದ್ದರೆ, ಅವರ ನುಣ್ಣನೇ ತಲೆಗೆ ಬಣ್ಣ, ಸಗಣಿ ಬಳೆದಿದ್ದರೆ ಯಾರೂ ಆ ಕಡೆ ಗಮನ ಕೊಡುವುದಿಲ್ಲ. ಮತ್ತೆ ಮುಂದಿನ ಅಕ್ಟೋಬರ್ ೨ ಅಥವಾ ಗಾಂಧೀಜಿ ಪುಣ್ಯತಿಥಿಯಂದು ಗಾಂಧೀಜಿ ಪುತ್ಥಳಿಯಿಂದ ಕಿತ್ತುಕೊಳ್ಳಲಾಗಿರುವ ಕನ್ನಡಕ ಸ್ಥಳದಲ್ಲಿ ಸರಕಾರಿ ಅಧಿಕಾರಿಗಳು ಮತ್ತೊಂದು ಕನ್ನಡಕ ತಂದು ಹಾಕುತ್ತಾರೆ. ನೀರು ಹಾಕಿ ಶುಚಿಗೊಳಿಸುತ್ತಾರೆ. ಯಥಾ ಸ್ಥಿತಿ ಗಾಂಧಿ ಅಹಿಂಸಾ ಮಾರ್ಗ, ಅವರ ತ್ಯಾಗ, ಹೋರಾಟ ಕುರಿತು ಭಾಷಣ ಮಾಡಲಾಗುತ್ತದೆ. ಕನ್ನಡಕ ತೆಗೆದವರು ಅಥವಾ ತೆಗೆಸಿದವರು ಅಂದು ಗಾಂಧಿ ಕುರಿತು ಭಾಷಣ ಮಾಡಿದರೆ ಅಚ್ಚರಿ ಪಡಬೇಕಾಗಿಲ್ಲ. ಹೌದು ಇಷ್ಟೆಲ್ಲ ಆದರೂ ಪ್ರತಿಭಟನೆ ಮಾಡುವವರೇ ಇಲ್ಲವಲ್ಲ. ಅವರು ಈ ದೇಶದ ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ರಾಷ್ಟ್ರಪಿತನಿಗೆ ಅವಮಾನವಾದರೆ ಪ್ರತಿಭಟಿಸುವವರೇ ಇಲ್ಲವೇ? ಎಂದು ಕೇಳಿದರೆ, ಇಲ್ಲ. ಯಾಕೆ? ಇದು ಕೂಡಾ ಗಾಂಧಿ ಬದುಕಿನ ಒಂದು ವೈಶಿಷ್ಟೆ.
ಏನದು ವೈಶಿಷ್ಟ್ಯ? ಗಾಂಧೀಜಿ ತಮಗಾಗಿ ಹೋರಾಟ ಮಾಡುವವರನ್ನು ಸೃಷ್ಟಿಸಿ ಇಟ್ಟು ಹೋಗಲಿಲ್ಲ. ಅವರು ದೇಶಕ್ಕಾಗಿ ಹೋರಾಟ ಮಾಡಿದರು. ದೇಶದ ಸಲುವಾಗಿ ಹೋರಾಟ ಮಾಡುವವರನ್ನು ಪ್ರೆತ್ಸಾಹಿಸಿ ಬೆಳೆಸಿದರು. ಗಾಂಧೀಜಿ ಅನುಯಾಯಿಗಳು ಇದ್ದರೆ ಅವರು ಗಾಂಧೀಜಿ ವೈಚಾರಿಕತೆಯನ್ನು ಪಾಲಿಸುವವರು ಮಾತ್ರ.
ಉಪಿನ ಮೇಲೆ ಬ್ರಿಟೀಷ್ ಸರಕಾರ ತೆರಿಗೆ ವಿಧಿಸಿದರೆ, ಗಾಂಧೀಜಿ ಸಮಗ್ರ ಭಾರತೀಯರನ್ನು ಸಂಘಟಿಸಿ ಅದರ ವಿರುದ್ಧ ಪ್ರತಿಭಟನೆ ಮಾಡಿದರು. ಅದುವೇ ಉಪ್ಪಿನ ಸತ್ಯಾಗ್ರಹ. ಬ್ರಿಟೀಷ್ ಸರಕಾರ ಅಲ್ಲಾಡಿಹೋಯಿತು. ಆದರೆ ಇವತ್ತು ಜನಸಾಮಾನ್ಯ ತನ್ನ ತುತ್ತಿನ ಚೀಲ ತುಂಬಲು ಉಪಯೋಗಿಸುವ ಅಕ್ಕಿದರ ಗಗನಕ್ಕೇರಿದರೂ ಪ್ರತಿಭಟಿಸುವವರು ದಿಕ್ಕಿಲ್ಲ. ದುಡಿದ ತಂದ ಕಾಳು ಬೀಸಿಕೊಂಡು ಊಟಮಾಡಬೇಕು ಎಂದು ಗಿರಣಿಗೆ ಅಗತ್ಯ ವಿದ್ಯುತ್ ಇಲ್ಲ. ಅದಕ್ಕೂ ಯಾರೂ ಪ್ರತಿಭಟಿಸುತ್ತಿಲ್ಲ. ಯಾಕೆ ಅಂತಾ?
ಹೌದು ಪಾಪ ಅವರು ಯಾರ ವಿರುದ್ಧ ಪ್ರತಿಭಟಿಸಬೇಕು. ಅವರ ಮಾತನ್ನು ಯಾರು ಕೇಳಬೇಕು. ಪ್ರತಿಭಟನೆ ಹೆಚ್ಚಾದರೆ ಪೊಲೀಸ್ ಲಾಟಿ, ಬೂಟುಗಳು ಖುಷಿಯಿಂದ ಕುಣುದಾಡುತ್ತವೆ. ಪ್ರಾಣ ಬೀದಿ ಪಾಲಾಗುತ್ತದೆ. ಅದಕ್ಕಂತಲೇ ಯಾರು ಪ್ರತಿಭಟನೆ ಮಾಡುತ್ತಿಲ್ಲ. ಈಗ ಪ್ರತಿಭಟನೆ ಬರೀ ರಾಜಕೀಯ ಪಕ್ಷಗಳ ಪ್ರಾಯೋಜಿತ ಸಂಘಟನೆಗಳ ಹಕ್ಕಾಗಿದೆ. ತಮಗೆ ಬೇಕಾದ ಪಕ್ಷ ಅಧಿಕಾರದಲ್ಲಿ ಇದ್ದರೆ ಅವರು ಯಾರೂ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡದೆ, ಬಾಯಿಗೆ ಬೀಗ ಹಾಕಿಕೊಂಡಿರುತ್ತಾರೆ. ಸಾಧ್ಯವಾದರ ಸರಕಾರದ ಪರವೇ ಬಹುಪರಾಕ ಹೇಳುತ್ತಾರೆ.
ಗಾಂಧೀಜಿ ಕೈಯಲ್ಲಿ ಬೀರು ಬಾಟಲಿ, ಮೌಂಸ ಬೇಯಿಸುವ ಚಿತ್ರ ನೋಡಿದ ನಂತರ ಇನ್ನೊಬ್ಬ ಜ್ಞಾನ ಪೀಠ ಪ್ರಶಸ್ತಿ ಕನ್ನಡ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಬರೆದಿರುವ ‘ಸುಕ್ಕುಗಟ್ಟಿದ ಅಜ್ಜನ ಹೆಗಲು’ ಕವನ ಸಂಕಲನದಲ್ಲಿ ಗಾಂಧೀಜಿ ಸೂಟು, ಬೂಟು ಧರಿಸಿದರೆ ಪೆಕರು ಪೆಕರಾಗಿ ಕಾಣುತ್ತಾರೆ ಎಂದು ಬರೆದಿದ್ದಾರೆ.
ಹೌದ ಗಾಂಧೀಜಿಗೆ ಏನೇ ರೂಪಕೊಡಲು ಯತ್ನಿಸಿದರೂ ಅವರು ಆ ತುಂಡು ಬಟ್ಟೆಯಲ್ಲೇ ನೀಟಾಗಿ ಕಂಡಷ್ಟು ಅವರು ತಮ್ಮ ಕಾಲೇಜ್ ದಿನಗಳಲ್ಲಿ ಧರಸಿದ್ದ ಸೂಟಿನಲ್ಲೂ ಕಾಣಿಸುವುದಿಲ್ಲ.

Tuesday, August 19, 2008

ಏಂತಹ ಜನಾ ಅಂತೇನ್ರಿ?

ಅಲ್ರೀ ಏನ್ ಜನಾ ಅಂತೇನಿ ಇವ್ರು. ಲೋಕಸಭೆಯಲ್ಲಿ ವಿಶ್ವಾಸ ಮತ ಗಳಿಸಲು ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷದವರು ಕೋಟಿಗಟ್ಟಲೇ ಹಣವನ್ನು ಸಂಸದರಿಗೆ ಕೊಟ್ಟು ಖರೀದಿ ಮಾಡಿದ್ರು. ಕೆಲವರನ್ನು ಖರೀದಿಸಲು ಯತ್ನಿಸಿದರು ಎಂದು ಸದನದಲ್ಲೇ ನೋಟಿನ ಕಟ್ಟು ಪ್ರದರ್ಶಿಸಿದರು.
ಅಣು ಒಪ್ಪಂದ ವಿಷಯ ಒತ್ತಟ್ಟಿಗೆ ಇರಲಿ. ಈ ಕೋಟಿಗಟ್ಟಲೆ ಹಣ ಲಂಚ ಕೊಡುವುದು ಐತಲ್ಲ. ಇದು ದೇಶಕ್ಕೆ ತುಂಬಾ ಅಪಾಯಕಾರಿ. ಹಣ ಕೊಟ್ಟರೆ, ಅಧಿಕಾರ ಕೊಟ್ಟರೆ ಮತಹಾಕುವುದು. ಪಕ್ಷ ಬದಲಿಸುವುದು. ಸಜ್ಜನರ ಕೆಲಸವೋ. ಕಳ್ಳಕಾಕರ ಕೆಲಸವೋ ಎಂದು ಜನರು ಇಂದು ತುಂಬಾ ಶಾಂತ ಚಿತ್ತದಿಂದ ಕುಳಿತು ವಿಚಾರ ಮಾಡಬೇಕಾಗೇದ.
ವಿಶ್ವಾಸ ಮತಕ್ಕೆ ಲಂಚ ಕೊಡುವ ಹಗರಣ ಮರೆಮಾಚಲು ದೇಶದಲ್ಲಿ ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷದವರು ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದಾರೆ. ಅಲ್ಲಲ್ಲಿ ಬಾಂಬ್ ಸ್ಫೋಟದಂತಹ ಪ್ರಕರಣಗಳಿಗೆ ಕುಮ್ಮಕು ನೀಡುತ್ತಾರೆ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಾರೆ. ಅಯ್ಯೋ ಮಹಾರಾಯ ಇದು ಸತ್ಯೇನಾ?. ನಾವೆಲ್ಲ ಸೇರಿ ಇಂತಹ ಸಂಸದರನ್ನು ಆಯ್ಕೆ ಮಾಡ್ತೇವಾ? ಅಯ್ಯಯ್ಯೋ ನಮ್ಮ ತಿಗಾಕ್ಕೆ ಯಾರರ ನಾಕೇಟು ಒದಿಲಿ. ಎಂತಹ ದುಷ್ಟ ಜನಾ ಇದ್ದೇವ್ರಿ ನಾವು? ಅಥವಾ ಸುಮ್ಮಸುಮ್ಮನೇ ಬೇಜವಾಬ್ದಾರಿ ಹೇಳಿಕೆ ನೀಡುತ್ರೋ ಹ್ಯಾಂಗೋ? ಹಂಗೇನರ ಇದ್ದರೆ ಬಾಯಿಗೆ ಬಂದ್ಹಂಗೆಲ್ಲ ಮಾತಾಡಿ ದೇಶದ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕ್ತಾರಲ್ಲ ಇಂತಹ ಜನರನ್ನು ಆಯ್ಕೆ ಮಾಡುವ ನಮಗೆಲ್ಲ ಏನಂತ ಅನಬೇಕು ಅಂತೇನಿ.
ಒಟ್ಟಿನ ಮೇಲೆ ಇಲ್ಲಾ ಅವರು ಕೆಟ್ಟವರು ಇದ್ದು ನಮ್ಮನ್ನೆಲ್ಲ ಹಾದಿ ತೆಪ್ಪಿಸಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿರಬೇಕು. ಇಲ್ಲಾ ನಾವು ಎಂತಹವರನ್ನು ಆಯ್ಕೆ ಮಾಡಬೇಕು ಎಂಬುದರ ಪ್ರಾಥಮಿಕ ಜ್ಞಾನ ಇಲ್ಲದೇ ಭಯೋತ್ಪಾದಕರು, ಬೇಜಾಬ್ದಾರಿ ಜನರನ್ನು ಆಯ್ಕೆ ಮಾಡಿ ಸಂಸತ್ಗೆ ಕಳಿಸುತ್ತಿರಬೇಕು.
ಅದಕ್ಕ ಭಾರತಕ್ಕೆ ಬ್ರಿಟೀಷರು ಸ್ವಾತಂತ್ರ್ಯ ಕೊಡಾಕ ಹಿಂದೇಟು ಹಾಕಿದರು. ಅಂದಿನ ಪ್ರಧಾನಿಯಾಗಿದ್ದ ಚರ್ಚಿಲ್, ‘ಭಾರತೀಯರು ಇನ್ನು ತಮ್ಮನ್ನ ತಾವು ಆಳ್ವಿಕೆ ಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿಲ್ಲ. ಈಗೇನರ ಸ್ವಾತಂತ್ರ್ಯ ಕೊಟ್ಟಿವಿ ಅಂದ್ರೆ ಭಾರತವನ್ನು ಕಳ್ಳಕಾಕರು, ದರೋಡೆಕೋರರು ಮುಂದೊಂದು ದಿನ ಆಳುತ್ತಾರೆ’ ಎಂದು ಹೇಳಿದ ಮಾತು ಈಗ ಖರೆ ಖರೇ ಅನಸ್ತದಲ್ಲಪೋ.
ಆದ್ರ ಗಾಂಧಿ ತಾತಾ ಅವರು ನೀವು ಮೊದಲು ದೇಶ ಬಿಟ್ಟು ಹೋಗ್ರಿ. ನಾವೆಲ್ಲ ದೇಶ ಆಳ್ತೇವಿ ಅಂತಾ ಹೇಳಿ ಅವರನ್ನ ಹೊರಗ ಹಾಕಿ ದೇಶನ ನಮ್ಮಂತಹವರ ಕೈಗೆ ಕೊಟ್ಟ ಹೋದ್ರು. ಕೊಟ್ಟದ್ದನ್ನು ಇಷ್ಟ ಚಂದಾಗಿ ಇಟ್ಕೊಂಡೇವಿ ನೋಡ್ರಿ.
ಛೇ. ನಮ್ಮದು ಎಂತಹ ದೇಶ, ನಾವು ಎಂತಹಾ ಜನ್ರು ಅಂತೇನಿ.

Tuesday, July 1, 2008

ಮಳೆ ಮಹಾದೇವನ ನೆನೆಯುತ

  • ಗೋವಿಂದ ಮಡಿವಾಳರ
ಗುರ್ಜಿ ಗುರ್ಜಿ ಎಲ್ಲಾಡಿ ಬಂದೀ,
ಹಳ್ಳಕೊಳ್ಳ ಸುತ್ತಿ, ಮಲ್ಲಾಡ್ಕ ಹೋಗಿ ಮಳೆ ತಂದೆ,
ಸುರಿಯೋ ಸುರಿಯೋ ಮಳೆರಾಯ....


ಎಂದು ಹಾಡಿಕೊಂಡು ಮುಂಗಾರ ಮಳೆ ಆರಂಭಕ್ಕೆ ವಿಳಂಬವಾದರೆ ದೇಶದ ಗ್ರಾಮೀಣ ಭಾಗದ ಮಕ್ಕಳು, ಮಹಿಳೆಯರು ಸೆಗಣಿ ಗುರ್ಜಿಯನ್ನು ತಲೆಯ ಮೇಲೆ ಇಟ್ಟುಕೊಂಡು ಗ್ರಾಮದ ಓಣಿ, ಓಣಿಗಳಲ್ಲಿ ಸುತ್ತಾಡುತ್ತಾರೆ.
ಹವಾಮಾನ ವೈಪರಿತ್ಯದಿಂದ ಮಳೆ ಬರುವುದು ವಿಳಂಬವಾದರೆ ರೈತ ಹೊಲ ಹಸನ ಮಾಡಿಕೊಂಡು ಬಿತ್ತನೆಗಾಗಿ ಮುಗಿಲತ್ತ ನೋಡುತ್ತಾ ಚಿಂತಾ ಕ್ರಾಂತನಾಗಿ ಕುಳಿತಾಗ ಗ್ರಾಮೀಣ ಜನತೆ ಮಳೆ ರಾಯನ ಆರಾಧನೆಯಲ್ಲಿ ತೊಡಗುತ್ತಾರೆ. ಮಳೆರಾಯನ ಆರಾಧನೆ ಒಂದೊಂದು ಊರಲ್ಲಿ ಒಂದೊಂದು ತರಹ ಆಚರಣೆ.
ನಮ್ಮೂರಲ್ಲಿ ಬಾಲಕರು, ಮಹಿಳೆಯರು ಸೇರಿಕೊಂಡು ಸೆಗಣಿ ಗುರ್ಜಿ ಮಾಡಿ, ಅದನ್ನು ರೊಟ್ಟಿ ಮಾಡುವ ಹಂಚಿನ ಮೇಲೆ ಇಟ್ಟು ಅದನ್ನು ತಲೆಮೇಲೆ ಹೊತ್ತು ಗ್ರಾಮದ ಓಣಿ, ಓಣಿಗಳಲ್ಲಿ ಮನೆಬಾಗಿಲಿಗೆ ಹೋದರೆ ಮನೆಯವರು ಒಂದು ತಂಬಿಗೆ ಅಥವಾ ಒಂದು ಕೊಡ ನೀರು ತಂದು ಗುರ್ಜಿ ಹೊತ್ತವರ ತಲೆ ಮೇಲಿಂದ ಮತ್ತು ಗುರ್ಜಿಗೆ ನೀರು ಬೀಳುವ ಹಾಗೆ ಸುರುವುತ್ತಾರೆ. ಆಗ ಗುರ್ಜಿ ಹೊತ್ತವನು ಸೆಗಣಿ ಗುರ್ಜಿಯು ಸುರಿಯುವ ನೀರಿಗೆ ಕರಗಿ ಹೋಗಬಾರದು ಎಂದು ಸ್ಪೀಡಾಗಿ ತಿರುಗುತ್ತಾನೆ. ಆಗ ಅದನ್ನು ನೋಡಲು ಸುತ್ತಮುತ್ತ ನಿಂತವರಿಗೆಲ್ಲ ನೀರು ಸಿಡಿಯುತ್ತದೆ. ಎಲ್ಲರೂ ಹೋ ಎಂದು ಬುಗುರೆ ತರಹ ತಿರುಗಿ ಸಂಭ್ರಮ ಪಡುತ್ತಾರೆ. ನೀರು ಹಾಕಿದವರು ಪೂಜೆ ಮಾಡಿ, ಜೋಳ ಕೊಡುತ್ತಾರೆ. ಗುರ್ಜಿಗೆ ಪೂಜೆ ಮಾಡುತ್ತ ಮಹಾದೇವ ಮಳೆ ಕೊಡಪ್ಪ, ಬೆಳೆ ಚೆನ್ನಾಗಿ ಬರಲಿ ಎಂದು ಬೇಡಿಕೊಳ್ಳುತ್ತಾರೆ.
ಹೀಗೆ ಗ್ರಾಮದ ಎಲ್ಲ ಓಣಿಗಳಲ್ಲಿ ಸುತ್ತಾಡುತ್ತಾರೆ. ಹುಡುಗರ ದಂಡೇ ಇರುತ್ತದೆ. ಕೆಲ ಹುಡುಗರು ರಾಗಬದ್ದವಾಗಿಗುರ್ಜಿ.. ಗುರ್ಜಿ ಎಲ್ಲಾಡಿ ಬಂದಿ ಎಂದು ಹಾಡುತ್ತಿದ್ದರೆ, ಇನ್ನು ಕೆಲ ಹುಡುಗರು ಹಳ್ಳಾಕೊಳ್ಳಾ ಸುತ್ತಿ ಮಲ್ಲಾಡ್ಕ ಹೋಗಿ ಮಳೆ ತಂದೆ..... ಎಂದು ಅವರು ಅಷ್ಟೇ ರಾಗ ಬದ್ದವಾಗಿ ಹಾಡುತ್ತಲೇ ಇರುತ್ತಾರೆ. ಮತ್ತೆ ಕೆಲವರುಸುರಿಯೋ ಸುರಿಯೋ ಮಳೆರಾಯ... ಎಂದು ಮಳೆ ರಾಯನ ಬಳಿ ಬೇಡುವ ಪರಿ ಇದು.
ಗ್ರಾಮ ಸುತ್ತಿದ ಮೇಲೆ ಜನರು ಕೊಟ್ಟ ಜೋಳವನ್ನು ಹಸನ ಮಾಡಿ ಗಿರಣಿಗೆ ಹೋಗಿ ನುಚ್ಚು ಮಾಡಿಸಿ ತಂದು ಅದನ್ನೇ ನುಚ್ಚು ಮಾಡಿಸಿ(ಸಂಗಟಿ, ಅಂಬ್ಲಿ, ಹೀಗೆ ವಿವಿಧ ಗ್ರಾಮಗಳಲ್ಲಿ ಅದನ್ನು ಕರೆಯುವ ರೂಢಿ.) ರಾತ್ರಿ ಊರಿಗೆಲ್ಲ ಊಟಕ್ಕೆ ನುಚ್ಚಿನ ಊಟ ಹಾಕಿಸುತ್ತಾರೆ.
ಊಟಕ್ಕೆ ಮುನ್ನ ಗ್ರಾಮದ ಮಹಿಳೆಯರು, ಹಿರಿಯರು ಸೇರಿ ಮಹಾದೇವನ ಸ್ಮರಣೆ ಕಾರ್ಯಕ್ರಮ ನಡೆಸುತ್ತಾರೆ. ಮಳೆರಾಯನ ಕುರಿತಾದ ಹಾಡುಗಳನ್ನು ಹಾಡುತ್ತಾರೆ. ಕೆಲ ಮುತ್ತೈದೆಯರನ್ನು ಕುಳ್ಳರಿಸಿ ಅವರಿಗೆ ಎಲ್ಲರಿಗಿಂತಲೂ ಮೊದಲು ಉಡಿ ತುಂಬಿಸಿ, ಊಟಕ್ಕೆ ಹಾಕಿ ನಂತರ ಎಲ್ಲರಿಗೂ ನುಚ್ಚು ಮತ್ತು ಬೇಳೆ ಸಾರಿನ ಊಟ ಹಾಕಿಸುತ್ತಾರೆ. ಇಂತಹ ಸಂಭ್ರಮ ರಾತ್ರಿಯಲ್ಲಾ ನಡೆಯುತ್ತದೆ.
ಹೀಗೆ ಮಾಡುವಾಗೆಲ್ಲ ಏನಾದರು ತುಂತುರ ಮಳೆ ಸುರಿದರೆ ಕುಂತ ಜಾಗದಿಂದ ಮನೆಗೆ ಓಡಿಹೋಗಿ ಬಚ್ಚಿಟ್ಟುಕೊಳ್ಳದೇ ಅಲ್ಲೇ ಯುವಕರು, ಯುವತಿಯರು ಪ್ರತ್ಯೇಕವಾಗಿ ಪರಸ್ಪರ ಕೈಗಳನ್ನು ಕ್ರಾಸ್ ಮಾಡಿ ಹಿಡಿದುಕೊಂಡು ಟಿ ಕಳ್ಳ ಮಳೆ, ಕಪಟ ಮಳೆ, ಸುಣ್ಣಾ ಕೊಡ್ತೇನಿ, ಬಣ್ಣಾ ಕೊಡ್ತೇನಿ....ಸುರಿಯಲೇ ಮಳೆ, ಸುರಿಯಲೇ ಮಳೆ. ಎಂದು ಪರಸ್ಪರ ಬಗಾಟ ಬಗರಿ ಆಡುತ್ತಾರೆ. ಹಿರಿಯರು, ಕಿರಿಯರು ಅವರ ಸಂಭ್ರಮ ನೋಡಿ ಮನತುಂಬಿ ನಗುತ್ತಾರೆ. ಮಳೆ ಜೋರಾಗಿ ಬಂತು ಅಂದ್ರೆ ದೇವರು ನಮ್ಮ ಹರಕೆಗೆ ಮೆಚ್ಚಿ ಮಳೆ ಕೊಟ್ಟ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಅಷ್ಟಾದರೂ ಮಳೆ ಬಾರದಿದ್ದರೆ ಯಾಕೋ ದೇವರು ನಮ್ಮ ಮೇಲೆ ಕಣ್ಣು ತೆರೆಯವಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಹೀಗೆ ಗ್ರಾಮೀಣ ಭಾರತದಲ್ಲಿ ‘ಕಷ್ಟ ಹೋಗಲಾಡಿಸು ದೇವನೆ’ ಎಂದು ಬೇಡಿಕೊಳ್ಳಲು ಕೂಡಾ ಸಂಭ್ರಮದ ಸಂಪ್ರದಾಯ.
ಇನ್ನು ಕೆಲವು ಕಡೆ ಒಂದೇ ವಾರಿಗೆಯ ೮ರಿಂದ ೧೦ ವರ್ಷ ವಯಸ್ಸಿನ ಸುಮಾರು ೧೦ರಿಂದ೧೫ ಬಾಲಕರನ್ನು ಸೇರಿಸಿ ಅವರು ಹುಟ್ಟಿದಾಗಿನ ಸೂಟ್ ಧರಿಸಿಕೊಂಡೆ(ಬೆತ್ತಲೆ) ತಲೆ ಮೇಲೆ ನೀರಿನ ಕೊಡ ಹೊತ್ತು ಮಳೆ ರಾಯನ ಆಹ್ವಾನಿಸುವ ಹಾಡು ಹಾಡುತ್ತ ಗ್ರಾಮ ಸುತ್ತುತ್ತಾರೆ. ಕೊನೆಗೆ ಅವರೆಲ್ಲ ಗ್ರಾಮದ ಪ್ರಮುಖ ದೇವರ ಗುಡಿ ಮುಂದೆ ನಿಂತು ತಲೆ ಮೇಲೆ ಹೊತ್ತ ಕೊಡದ ನೀರನ್ನು ಗ್ರಾಮದ ದೇವರ ಗುಡಿ ಮುಂದೆ ಸುರಿದು ದೇವರೇ ಮಳೆ ತಾರಪ್ಪ ಎಂದು ಬೇಡಿಕೊಳ್ಳುತ್ತಾರೆ. ಹೀಗೆ ಒಂದೊಂದು ಊರಲ್ಲಿ ಒಂದೊಂದು ಸಂಪ್ರದಾಯ.
ಇಂತಹ ಸಂಪ್ರದಾಯಗಳೊಂದಿಗೆ ಕತ್ತೆ ಮೆರವಣಿಗೆ ಮಾಡುವುದು ಒಂದು. ಹೀಗೆ ಹಲವಾರು ಸಂಪ್ರದಾಯ ಇವೆ. ಸಂಪ್ರದಾಯಕ್ಕೆ ಒಂದಿಷ್ಟು ಜಾನಪದ ಹಾಡುಗಳು. ಸಂಸ್ಕೃತಿ ಮತ್ತು ಸಾಹಿತ್ಯವನ್ನು ಸಂಪ್ರದಾಯ ಗೊಳಿಸಿದ ಗ್ರಾಮೀಣ ಭಾರತದ ಜನಪದ ಇಂದು ಕ್ರಮೇಣ ನಾಗರಿಕತೆಯ ಹೆಸರಿನಲ್ಲಿ ಕರಗುತ್ತಿದೆ.
ಜಾನಪದ ಸಾಹಿತ್ಯ, ಸಂಪ್ರದಾಯಗಳು ಇಂದು ಸಿನಿಮಾದಲ್ಲಿ ನೋಡಿ ಆನಂದಿಸಬೇಕಾಗಿದೆ. ಆದರೆ ನಮ್ಮ ಗ್ರಾಮೀಣ ಜನತೆ ಕ್ರಮೇಣ ಇಂತಹ ಶ್ರೀಮಂತ ಸಂಪ್ರದಾಯಗಳನ್ನು ಮೂಢ ನಂಬಿಕೆಗಳು ಎಂದು ಕಡೆಗಣಿಸುತ್ತಿದ್ದಾರೆ. ಆದರೆ ಮೂಢ ನಂಬಿಕೆ ಉಳಿಸಿಕೊಳ್ಳಬೇಕು ಎಂದು ನಾನು ಇಲ್ಲಿ ಪ್ರತಿಪಾದಿಸುತ್ತಿಲ್ಲ. ಪ್ರಾಣ ಬಲಿ ಕೊಟ್ಟು ಮಳೆ ಆಹ್ವಾನಿಸುವ, ನಾಗರಿಕ ಜಗತ್ತು ತಲೆ ತಗ್ಗಿಸುವಂತ ಮೂಢನಂಬಿಕೆಗಳನ್ನು ಬೇರು ಸಮೇತ ಕಿತ್ತಹಾಕಬೇಕು. ಆದರೆ ಗ್ರಾಮ ಭಾರತ ಜನಪದ ಬದುಕು ಹಸನಾಗಿಸಲು, ಒಗ್ಗಟ್ಟಿನಿಂದ ಇರಲು ಗ್ರಾಮೀಣ ಸಂಪ್ರದಾಯಗಳು ಇರಬೇಕು.

ಲೇಖನವು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.

Tuesday, May 27, 2008

ಊರಲ್ಲ ಬಿಡಿ ಇದು ಸಿಟಿ

  • ಗೋವಿಂದ ಮಡಿವಾಳರ

ಊರಲ್ಲ ಬಿಡಿ ಇದು ಸಿಟಿ
ಕಚೇರಿ ಕೆಲ್ಸಕ್ಕಂತ ಬೆಂಗ್ಳೂರಿಗೆ ಹೋಗಿದ್ದ ನಮ್ಮ ಬಸವನಿಗೆ ಅಲ್ಲಿ ಓಡಾಡುವ ಗಾಡಿ ನೋಡಿ ಬೆಂಗ್ಳೂರಾಗ ಜನರು ಹೆಚ್ಚೋ, ವಾಹನ ಹೆಚ್ಚೋ ಎಂಬ ದಿಗಿಲಾಯಿತು. ತಾನು ಬಸ್‌ನ್ಯಾಗ ಹೋಗೋದೋ, ರಸ್ತೆದ್ಯಾಗ ಹೋಗೋದು ಅಂತಾ ಚಿಂತೆಗೀಡಾದ. ಅಂತೂ ಇಂತೂ ದೊಡ್ಡ ಸಮಸ್ಯೆ ನೀಗಿಸ್ಕೊಂಡವನ ಹಾಂಗ ರಿಕ್ಷಾ ಹಿಡಿದು ಕಚೇರಿಗೆ ಹೋದ. ಕೆಲ್ಸ ಮುಗ್ಸಿಕೊಂಡು ಅಲ್ಲಿಂದ ಪರಿಚಯದವರ ಮನೆಗೆ ಹೋಗಬೇಕು ಅಂತಾ ವಿಳಾಸ ಕೇಳಿಕೊಂಡು ಬಸ್ ನಿಲ್ದಾಣಕ್ಕೆ ಹೋದ. ಒಂದು ಪ್ಲಾಟ್ ಫಾರ್ಮ್‌ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‌ಗೆ ಅಲೆದೆ ಅಂತು ಹೋಗಬೇಕಾಗಿದ್ದ ಸುಂಕದ ಕಟ್ಟೆ ಬಸ್ ಹಿಡಿದ.
ಬಸ್ ತುಂಬೆಲ್ಲ ಮಂದಿ. ಬಸ್ ಹೊರಟಿತು. ಸುಂಕದ ಕಟ್ಟೆ ಅಂದ ಕೂಡಲೇ ಕವಿ ಬೇಂದ್ರೆ ಬರೆದ... ಟೊಂಕದ ಮೇಲೆ ಕೈ ಇಟ್ಕೊಂಡು ಬಿಂಕದಾಕಿ ಇವಳಾರು ಇಕಿ,
ಒಂಟಿ ತೋಳು ತೋರುಸ್ತಾಳ ಸುಂಕದ ಕಟ್ಯಾಂವಗ,
ಇವಳು ಸುಂಕದ ಕಟ್ಯಾಂವಗ.
ಎಣ್ಣಾ ಮಾಂವ ಅಂತ ರಮಿಸಿ ಬಣ್ಣದ ಮಾತು ಆಡುವಾಕಿ,
ಇವಳಿ ಬಣ್ಣದ ಮಾತು ಆಡುವಾಕಿ.
ಮೆಂತೆ ಸಿವುಡು ಕಟ್ಟಿಕೊಂಡು ಸಂತಿ ಪ್ಯಾಟಿ ಮಾಡುವಾಕಿ ಇವಳು ಸಣ್ಣನ ನಡದಾಕಿ ಇವಳು ಸಣ್ಣನ ನಡದಾಕಿ,
ಎಂಬ ಹಾಡು ನೆನಪಾಗಿ ಗದುಗಿನ ಪಕ್ಕದ ಬಿಂಕದ ಕಟ್ಟಿ ಗ್ರಾಮ ಈ ಬೆಂಗಳೂರಿನ ಸುಂಕದಕಟ್ಟಿ ಒಂದೇ ಅನಿಸಿ ಹಾಡಿನ ಗುಂಗಿನಲ್ಲಿ ಪಕ್ಕದಲ್ಲೇ ನಿಂತಿದ್ದ ಯುವಕನೊಬ್ಬನನ್ನು ಸುಂಕದ ಕಟ್ಟಿ ಊರು ಇನ್ನು ಎಷ್ಟು ದೂರ ಐತ್ರಿ ಅಂತಾ ಬಸವ ಕೇಳಿದ.
ಆ ಯುವಕ ಬಸವನನ್ನು ಅಡಿಯಿಂದ ಮುಡಿತನಕ ನೋಡಿ ‘ಏ, ಊರಂತೆ ಊರು. ಸುಂಕದ ಕಟ್ಟಿ ಊರಲ್ಲ ಸಿಟಿ. ಬೆಂಗಳೂರು ಸಿಟಿ. ಅಂ..’ ಅಂದು ದುರುಗುಟ್ಟಿ ನೋಡಿದ. ಮಾತಿನ ತಪ್ಪಿನ ಅರಿವಾಗಿ, ಅಲ್ಲಪಾ ಸುಂಕದ ಕಟ್ಟಿ ಸ್ಟಾಪ್ ಇನ್ನು ಎಷ್ಟು ದೂರು ಅದ ಅಂತಾ ಕೇಳುವ ಬದಲು ಊರು ಅಂತಾ ಕೇಳಿದೆ ಎಂದು ಸಾಬೂಬು ಹೇಳಿದ. ಆದರೆ ಆ ಯುವಕ ಯಾವುದಕ್ಕೂ ಪ್ರತಿಕ್ರಿಯೇ ತೋರದೆ ಸ್ವಲ್ಪು ಹಿಂದೆ ಸರಿದು ನಿಂತ. ಆಗ ಕಂಡಕ್ಟರ್, ‘ಏಜಮಾನ್ರೆ ಇನ್ನು ಎರಡು ಸ್ಟಾಪ್ ಆದ ಮೇಲೆ ಸುಂಕದ ಕಟ್ಟೆ ಬರತೈತಿ ಏಳ್ರಿ’ ಅಂದ.
ಕಂಡಕ್ಟರ್‌ನ ತಲ್ಯಾಗಿನ ಎಲ್ಲ ಕೂಲ್ದಾ ಬೆಳ್ಳಗ ಅಗ್ಯಾಂವ. ಇನ್ನೊಂದು ವರ್ಷದಾಗೋ, ಎರಡ ವರ್ಷದಾಗ ರಿಟಾಯರ್‍ಡ್ ಆಗಾಂವ ಇದ್ಹಾಂಗ ಅದಾನ, ಅದರೂ ೪೦ರ ಆಸುಪಾಸಿನ ಬಸವನಿಗೆ ಅಂವಾ ಯಜಮಾನ್ರ ಅಂದಾಗ ಬಸವ ಗಲಿಬಿಲಿಗೊಂಡ. ಅಂವಾ ನನಗಿಂತ ಸಣ್ಣಾಂವ ಅದಾನೇನು ಅಂತ ಬಸವ ತನ್ನಷ್ಟಕ್ಕ ತಾನ ಅಂದ್ಕೊಂಡ. ಅಥವಾ ನಾನ ಮುದುಕರ ಹಂಗ ಕಾಣ್ತೇನಿ ಏನು? ಎಂದು ಚಿಂತ ಮಾಡುತ್ತಿರುವಾಗ ಮತ್ತೆ ಕಂಡಕ್ಚರ್ ‘ಯಜಮಾನ್ರ ಸುಂಕದ ಕಟ್ಟೆ ಬಂತು. ಇಳಿರಿ’ ಎಂದು ಎಚ್ಚರಿಸಿದ. ಬಸ್ ಇಳಿದ ಸಂಬಂಧಿಕರ ಮನೆಗೆ ಹೋಗಿ ಮುಖ ತೊಳೆದುಕೊಂಡು ಒರೆಸಿಕೊಳ್ಳುವ ನೆಪದಲ್ಲಿ ಕನ್ನಡಿ ಮುಂದೆ ಹೋಗಿ ನಿಂತ್ಕೊಂಡು ನೋಡ್ಕೊಂಡ. ಮುಖ ಹೊಳ್ಳಿ ಹೊಳ್ಳಿಸಿ ನೋಡ್ಕೊಂಡ. ಛೇ ಹಂಗೇನು ಇಲ್ಲ. ಅಂವಾ ಹಂಗ್ಯಾಕ ಅಂದಾ... ಎಂದು ಚಿಂತಿಸುತ್ತಿರುವಾಗ ಹಿಂದೆ ಏರೋ ನಕ್ಕಂಗ ಆಯಿತು. ಹೊಳ್ಳಿ ನೋಡಿದ್ರ ಬಸವನ ಅಳಿಯ ನಿಂತಿದ್ದ. ಯಾಕ್ರಿ ಮಾಮಾ ಕನ್ನಡಿಯಾಗ ಮುಖ ಅಷ್ಟಾಕ ನೋಡಿಕೊಳ್ಳಾಕಹತ್ತೀರಿ? ಮತ್ತೊಮ್ಮೆ ಕನ್ಯಾ ನೋಡಾಕ ಹೋಗಾಂವ್ರು ಇದ್ದೀರೇನು? ಅಂತಾ ಕೇಳಿದ.
ಏ ಹೊಗ್ಗಾ ನೀನ, ಎಲ್ಲಿ ಕನ್ಯಾ, ಬಸ್ಸಿನಾಗ ಬರಾಕ ಹತ್ತಿದಾಗ ಕಂಡಕ್ಟರ್ ಇದ್ದಾನಲ್ಲ ನನಗೆ ಯಜಮಾನ್ರ ಅಂದ. ಅದಕ್ಕ ಮುದುಕೇನರ ಆಗೇನೇನ ಅಂತಾ ನೋಡ್ಕೊಂಡೆ ಅಂದಾಗ ಅಂವಾ ನಕ್ಕು, ಹಂಗಾರಿ ಮಾಮಾ ಇಲ್ಲಿ. ಎಲ್ಲರೂ ತಾವು ಇನ್ನು ಚಿರಯವ್ವನರ, ಉಳಿದವರು ಮುದುಕ್ರು ಅನ್ನೋತರಹ ಮಾತಾಡ್ತಾರ. ಅದನ್ಯಾಕ ಮನಸ್ಸಿಗೆ ಹಚ್ಚಿಕೊಂತಿರಿ ಬಿಡ್ರಿ ಎಂದು ಸಮಾಧಾನ ಮಾಡಿದ.
ಬಸವನಿಗೆ ಮನಸು ಸ್ವಲ್ಪ ಹಳಾರ ಅನಿಸ್ತು. ಅಸ್ಟೊತ್ತಿಗೆ ಸಂಬಂಧಿಕರ ಮನೆಯವರು ಪಾನಕಾ ಕೊಟ್ಟರು. ಕುಡಿದು, ಅವರನ್ನೆಲ್ಲಿ ಮಾತಾಡಿಸಿಕೊಂಡು ಮತ್ತೆ ತನ್ನ ಊರಿಗೆ ಹೋಗಾಕ ಬಸ್ ನಿಲ್ದಾಣಕ್ಕೆ ಬಂದ. ಆಗಲೇ ಸಂಜೆ ಆಗಿತ್ತು. ಮುಂಜಾನೆ ಎಂತ ಚಂದರ ಕಾಣ್ತಿದ್ದ ಬೆಂಗಳೂರ್ ಆನಂದರಾವ್ ಸರ್ಕಲ್‌ನಾಗಿನ ಫುಟ್ ಪಾತ್‌ಗಳು ಸಂಜೆ ಹೊತ್ತಿಗೆ ಕೈಗಾಡಿಗಳಿಂದ ಸಿಂಗರಿಸಿಕೊಂಡಿದ್ದವು. ಕರಿದ ಪದಾರ್ಥದ ವಾಸನಿ, ಮೀನಗಾರ ಮೀನಕ್ಕೆ ಗಾಳಹಾಕಿ ಎಳೆದ್ಹಂಗ ಎಳೆಯಾಕ ಹತ್ತಿತು. ಹೋಗಿ ನೋಡ್ದಾ. ಚಪಾತಿ ಅಡ್ಡಗಲ ಪುರೆ, ಮಾಡಿ ಕೊಡ್ತಿದ್ರು. ಜನಾನು ಹಂಗ ಅಲ್ಲೇ ಫುಟ್ ಪಾತ್‌ನ್ಯಾಗ ನಿಂತು ಗಬಾಗಬಾ ಅಂತಾ ತಿಂತಿದ್ರು. ರಸ್ತೆದಾಗ ಬಸ್, ಲಾರಿ, ಕಾರು ಹೀಂಗ ನಾನಾ ವಾಹನ ದೂಳದ ಒಕಳಿಯಾಡತಿದ್ದವು. ಅದರ ದರಕಾರನ ಇವರಿಗೆ ಇದ್ಹಾಂಗ ಕಾಣಲಿಲ್ಲ. ಅಲಾ ಇವನ ನಮ್ಮ ಹಳ್ಯಾಗ ಹೀಂಗ ರಸ್ತೆದಾಗ ನಿಂತು ಊಟಾ ಮಾಡಕ್ಕಿಲ್ಲ ಬಿಡು. ಖರೇ ಐತಿ ಬಿಡು. ಇದು ಸಿಟಿ ಅಲ್ವಾ!. ಹಳ್ಳಿಯಾದ್ರ ಒಂದು ಗುಡಸಲ್ದಾಗಾದ್ರು ಕುಂತು ಊಟ ಮಾಡ್ತಾರ. ಕೊನೆಗೆ ಗಿಡದ ನೆಳ್ಳಾಗರ ಕುಂತು ಊಟಾ ಮಾಡ್ತಾರ ಬಿಡು. ಅಂವಾ ಹೇಳಿದ್ದು ಖರೇ ಐತಿ. ಇದು ಸಿಟಿರಿ ಸಿಟಿ ಅಂತಾ.
ಬೆಂಗಳೂರಿಂದ ಮತ್ತೆ ತಮ್ಮೂರಿಗೆ ಹೊಂಟ ನಿಂತ ಬಸವನಿಗೆ ಬಸ್‌ನಲ್ಲಿ ಪಕ್ಕದ ಸೀಟಿನಾಗ ಒಬ್ಬ ಯುವಕ ಕುಂತಿದ್ದ. ಯಾವ ಊರು? ಏನು ಎಂತು ಹೀಗ ಪರಸ್ಪರ ಇಚಾರಿಸಿಕೊಂಡ ಮೇಲೆ ಬೆಂಗ್ಳೂರಾಗ ಎಂತೆಂತೋದೋ ಊಟ ಕೊಡ್ತಾರ. ಬಾಯಿಗೆ ಬಂದಷ್ಟು ರೇಟು ಹೇಳ್ತಾರ. ಅಷ್ಟನ್ನೂ ಕೊಟ್ಟ ಬರಬೇಕು ಎಂದು ಹೇಳುತ್ತು.... ಮೊನ್ನ ಒಂದು ಮಜಾ ಸಂಗತಿ ಆತು ನೋಡ್ರಿ.
ಏನಪಾ ಅಂದ್ರ.... ಬೆಂಗಳೂರಿನ ಐಟಿ ಕಂಪನಿಯ ಮುಖ್ಯಸ್ಥರೊಬ್ಬರು ಹೊಟೇಲ್ ವೊಂದರಲ್ಲಿ ಹೋಗಿ ‘ನಮ್ಕಿನ್ ಲಸ್ಸೀ’ ಕುಡಿದು ಬಂದು, ತಮ್ಮ ಆಫೀಸಿನ್ಯಾಗ, ಎಲ್ಲರ ಎದುರಿಗೆ ನಾ ಇವತ್ತು ನಮ್ಕಿನ್ ಲಸ್ಸಿ ಕುಡಿದೆ. (I never seen this kind of ‘NAMKIN LASSi’. It is very good and tasty ) ಎಂದು ಬಣ್ಣಿಸಿದ್ದಲ್ಲದೇ ತನ್ನ ಸ್ಠಾಫ್‌ಗೆ ಮರುದಿನ ನಮ್ಕಿನ್ ಲಸ್ಸಿ ಕುಡಿಯಾಕ ಕರಕೊಂಡು ಹೋಟಲ್‌ಗೆ ಹೋದ್ರು. ಎಲ್ಲರೂ ಕುಡಿದ್ರು. ಅದರಾಗ ಹಳ್ಳಿಯಿಂದ ಬಂದ ಯುವಕ ಏ ಇದು ಮಜ್ಜಿಗೆ ಸಾರ್ ಬಿಡ್ರಿ. ಅಂದ. ಸಿ.ಇ.ಓ. ಸಾಹೇಬ್ರ, ವಾಟ್ ಮಜ್ಜಿಗೆ ಸಾರ್, ಇಟ್ಟೀಸ್ ನಮ್ಕಿನ ಲಸ್ಸಿ ಇಸಂಟಿಟ್ (ಮಜ್ಜಿಗೆ ಸಾರ್ ಅಲ್ಲ. ಇದು ನಮ್ಕಿನ್ ಲಸ್ಕಿ ಗೊತ್ತಾತಿಲ್ಲ) ಅಂತಾ ಹೇಳಿದ. ಯಸ್ ಸರ್ ಇಟ್ಟೀಸ್ ನಮ್ಕಿನ್ ಲಸ್ಸಿ. ಇಟ್ಟಿ ಈಸ್ ಸಿಟಿ ಫಾಸ್ಟ್ ಫುಡ್ ಅಂದಾ. ಅದಕ್ಕ ಸಿಇಓ ಖುಷ್ ಆಗಿ. ಯುವರ್ ಗ್ರ್ಯಾಸ್ಪಿಂಗ್ ಫಾವರ್ ಇಸ್ ವೆರಿ ಹೈ ಎಂದ. ಇಬ್ಬರು ಒಟ್ಟೊಟ್ಟಿಗೆ ನಕ್ಕ ಸುಮ್ಮನಾದರು.
ನಗರೀಕರಣಗೊಂಡ ಮಜ್ಜಿಗೆ ಸಾರು ಲಸ್ಸಿಯಾದ ಐಟೆಂಗೆ ಪಟ್ಟಣದಲ್ಲಿ ಪ್ರತಿ ಗ್ಲಾಸ್‌ಗೆ ೨೫ ರುಪಾಯಿ!.ಸಾಹೇಬ್ರ ಕರಕೊಂಡು ಹೋಗ್ಯಾರ ಅಂದ ಮ್ಯಾಲೆ ಫಸ್ಕ್ಲಾಸ್ ಐತಿ, ಥ್ಯಾಂಕ್ಯೂ ಎಂದು ಹೇಳಿ ಎಲ್ಲರೂ ಕುಡಿದ್ರು. ಅಂದ
ಹಳ್ಳಿಯೊಳಗೆ ಮಾಡುವ ‘ಮಜ್ಜಿಗೆ ಸಾರು’ ಈ ನಮ್ಕಿನ್ ಲಸ್ಸಿಗೂ ಏನೂ ಫರಕ ಇದ್ದಿರಲಿಲ್ಲ. ಅಂತಹ ಒಂದು ಗ್ಲಾಸ್ ನಮ್ಕಿನ್ ಲಸ್ಸಿಗೆ ೨೫ ರುಪಾಯಿ!.ಇದೆಲ್ಲ ಹೈಟೆಕ್ ಮಂದಿ ನೋಡ್ರಿ. ಎಲ್ಲ ಹೀಂಗ. ಸಂಬಳ ಜಾಸ್ತಿ, ಬಾಯಿಗೆ ಅಟು ರುಚಿ ಹತ್ತಿದ್ರ ಸಾಕು. ಹೇಳಿದಷ್ಟು ದುಡ್ಡು ಕೊಡ್ತಾರ ನೋಡ್ರಿ.
ಎಷ್ಟೇ ಆಗ್ಲಿರಿ ಸಿಟಿ ಜನ ನೋಡ್ರಿ ಅವ್ರು. ಸಿಟಿ ಅಂದ್ರ ಹೀಂಗ ಅಂತ ಕಾಣ್ತದ ಬಿಡ್ರಿ. ಅದಕ್ಕ ಆ ಯುವಕ ಊರಲ್ಲ ಇದು ಸಿಟಿ ಅಂದದ್ದು ನೋಡ್ರಿ.
ಬಸವನಿಗೆ ಮಜ್ಜಿಗೆ ಸಾರ ಅಂದ ಕೂಡ್ಲೆ ಅವ್ರು ಅಜ್ಜಿ ಬ್ಯಾಸಗಿ ದಿನದಾಗ ಒಗ್ಗರಣಿ ಮಜ್ಜಿಗಿ ಮಾಡಿ, ಕರಿದ ಮೆಣಸಿನಕಾಯಿ ಮಾಡಿ ಊಟಕ್ಕೆ ಹಾಕಿದ್ರು ಅಂದ್ರ ಎರಡು ತುತ್ತು ಊಟ ಜಾಸ್ತಿನ ಮಾಡುತ್ತಿದ್ದದ್ದು ನೆನಪಾಗಿ ಮೆಲ್ಲಕ ಬಾಯಿ ಚಪ್ಪರಿಸಿದ. ಅಷ್ಟೊತ್ತಿಗೆ ಬಸ್ ಮೆಲ್ಲಕ ಹೋಗಾಕ ಹತ್ತಿತ್ತು. ರಸ್ತೆ ಪಕ್ಕದ ಚಹಾದ ಅಂಗಡಿ ಕಡೆಯಿಂದ ನಮ್ಮೂರ ನಮಗ ಪಾಡ. ಯಾತಕ್ಕವ್ವ ಹುಬ್ಬಳ್ಳಿ-ಧಾರವಾಡ ಎಂಬ ಹಾಡು ಕೇಳಿಸಲಾರಂಭಿಸಿತು. ಬಸವ ಗುಣಗುಣಸುತ ನಿದ್ರೆ ಹೋದ.
(ಕನ್ನಡಪ್ರಭ ಮೇ ೨೫ರ ಸಾಪ್ತಾಹಿಕ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.)

Sunday, February 10, 2008

ಮಗಳು ತಾಯಿ ಇದ್ಹಾಂಗ

ಎಚ್.ಗೋಪಿಕಾ(ಗೋವಿಂದ ಮಡಿವಾಳರ)

ಶಾರದಿ ಇವತ್ತು ಏನಾತು ಅಂದ್ರೆ...
ನನ್ಮಗಳು ಗೌರಿ ಇದ್ದಾಳಲ್ಲ. ಸ್ಕೂಟರ್ ತಂದು ಮನೆಮುಂದ ನಿಲ್ಲಿಸಿ ಅಮ್ಮ ಬೇಗೆ ರೇಡಿಯಾಗು ದೇವಸ್ಥಾನಕ್ಕೆ ಹೋಗೋಣ ಅಂದ್ಲು. ಜೀವನದಲ್ಲಿ ಪ್ರಥಮ ಬಾರಿಗೆ ಇಂತಹ ಒಂದು ಮಾತು ಕೇಳಿ ಅದೆಂತಹ ಖುಷಿ ಅಯಿತು ಅಂತಿಯಾ?...
ಮೆಂತೆಪಲ್ಲೆ ಸೋಸುವುದನ್ನು ಬಿಟ್ಟು ಸರ ಸರಾಂತ ಮನೆತುಂಬಾ ಓಡಾಡಿ ತಯಾರಾದೆ. ಇವರು ಕಂಪ್ಯೂಟರ್ ಮುಂದೆ ಕೂತು ಅದೇನೋ ಟೈಪ್ ಮಾಡ್ತಾ ಇದ್ದರು. ದೇವಸ್ಥಾನಕ್ಕೆ ಹೋಗ ಬರ್‍ತೇನ್ರಿ, ಮನೆಕಡೆ ಜೋಕಿ, ಜಿಮ್ಮಿ ಬಾಗಲದಾಗ ಮಲಗೇತಿ ಎಂದು ಹೇಳುತ್ತಾ ಅವರ ಅನುಮತಿಗೂ ಕಾಯದೇ ಮಗಳೊಂದಿಗೆ ಮನೆ ಗೇಟ್ ತಡಾದು ರಸ್ತೆಗೆ ಬಂದು ಸ್ಕೂಟರ್ ಸೀಟು ತಡವುತ್ತ ನಿಂತೆ....
ಮಗಳು ‘ಯವ್ವಾ ಬೇ’ ಗಾಡಿ ಹತ್ತಬೇ ಎಂದಾಗ, ಸ್ಕೂಟರ್ ಆಗಲೇ ಚಾಲು ಆಗಿತ್ತು. ಹತ್ತಿ ಕುಳಿತೆ. ಮಗಳು ನನ್ನ ಕೈ, ತನ್ನ ಹೆಗಲ ಮೇಲೆ ಇಟ್ಕೊಂಟು ಗಾಡಿ ಹೊಡೆಯುತ್ತಿರುವಾಗ ನಮ್ಮ ಗೌರಿ ನನಗ ಪೈಲಟ್ ತರಹ ಕಂಡಳು. ಖರೆ ಖರೆ ಹೇಳಬೇಕಂದ್ರ ಅಲ್ಲಿ ತಾಯ್ತನದ ಸ್ಪರ್ಷ ಅದ್ಹಾಂಗ ಆತು. ಮಗುವಿನ ತರಹ ಹಾಗೇ ಕುಳಿತೆ. ಅಷ್ಟು ಜನ ಗಂಡ್ಸೂರು ಗಾಡಿ ಓಡಿಸುವ ಮಧ್ಯೆ ಗೌರಿ ಗಾಡಿನ.. ಜೋರದ ಅನಿಸ್ತು ನೋಡು. ದೇವಸ್ಥಾನದ ಬಳಿ ಗಾಡಿ ನಿಂತಾಗ ಗಾಡಿಯಿಂದ ಇಳಿದ ಮಗಳ ಕೈ ಕೈಯಾಗ ತಗೊಂಡು ಸಣ್ಣಗ ಅದುಮಿ ಕೃತಜ್ಞತೆ ಸಲ್ಲಿಸಿದೆ.
ನನ್ನ ಮಗ ರವಿ ಎಂದೂ ಒಂದು ದಿನ ಹೀಂಗ ಸ್ಕೂಟರ್ ಮೇಲೆ ಕರದ ಕುಡ್ರಿಸಿಕೊಂಡು, ಆತ್ಮಿಯತೆಯಿಂದ ಕರಕೊಂಡು ಹೋದದ್ದು ನೆನಪೇ ಇಲ್ಲ. ಎಲ್ಲೆರ ಅರ್ಜೆಂಟ್ ಹೋಗದಿದ್ರ ಸ್ವಲ್ಪ ಗಾಡಿ ಮೇಲೆ ಬಿಟ್ಟು ಬಾರೋ ರವಿ ಅಂದ್ರ, ಅಮ್ಮ ನೀವು ಹೆಣ್ಮಕ್ಕಳು ಲಗೂನ ತಯಾರ ಆಗ್ಹೋಂಗಿಲ್ಲ. ನಾ ನನ್ನ ಫ್ರೆಂಡ್ಸ್‌ಗೆ ಬೇಗ ಬರ್‍ತೇನಿ ಅಂತಾ ಹೇಳೇನಿ ನೀನು ರಿಕ್ಷಾ ಮಾಡಿಕೊಂಡು ಹೋಗು ಅಂತಾ ಹೇಳ್ತಾನ. ತಾಯಿ ಮಾತಗಿಂತ ಗೆಳೆಯರ ಮಾತ ಜಾಸ್ತಿಯೇನೋ ಅಂತ ಗದರಿಸಿದ್ರ ಗೊಣಗಾಡಿಕ್ಕೊಂತ ಕರ್‍ಕೊಂಡು ಹೋಗ್ತಾನ. ಮರಳಿ ಬರಬೇಕಾದ್ರ ಮತ್ತ ನಾನು ಬಸ್ಸೋ, ರಿಕ್ಷಾದಾಗೋ ಬರಬೇಕು. ಗೌರಿ ಹಂಗಲ್ಲ. ಕರ್‍ಕೊಂಡು ಹೋಗಿ ನನ್ನ ಜತೆಗೆ ಕೆಲಸ ಮುಗಿಯುವ ತನಕ ಇದ್ದು ಜತನದಿಂದ ಕರಕೊಂಡು ಬರ್‍ತಾಳ.
ನೋಡೇ ಶಾರದಿ ನಾವು ಹತ್ತು ದೇವರಿಗೆ ಹರಕಿ ಹೊತ್ತ ಜನ್ಮ ನೀಡಿದ ಗಂಡಸು ಮಗನಿಗೂ, ಬೇಡದ ಮನಸಿನಿಂದ ಜನ್ಮ ನೀಡುವ ಹೆಣ್ಣು ಮಗುವಿಗೂ ಇರುವ ಅಂತರ. ನನಗ ಅನಸ್ತದ ಯಾತಕವ್ವ ಈ ಪರಿ ಗಂಡು ಸಂತಾನಕ್ಕೆ ಹಪಹಪಿ ಮಾಡೋದು ಅಂತಾ.
ಸ್ಕೂಟರ್ ಮೇಲೆ ಹತ್ತಿಸ್ಕೊಂಡು ಹೋದ ಕೂಡ್ಲೆ ಮಗಳ ಮೇಲೆ ಅಷ್ಟು ಪ್ರೀತಿ ಉಕ್ಕಿತಾ ಅಂತಾ ಅನ್ಕೋಬ್ಯಾಡ. ಅಕಿಗೆ ನೌಕರ ಸಿಕ್ಕಾಗನಿಂದ ನೋಡ್ತೇನಿ...
ಅವ್ವಾ ಇವತ್ತು ಸಂಜೆ ಸ್ವಲ್ಪ ಬೇಗ ಸಜ್ಜಾಗಿರು. ನಾನು ಬೇಗ ಬರ್‍ತೇನಿ. ಇಬ್ಬರು ದೇವಸ್ಥಾನಕ್ಕ ಹೋಗಿ ಹಂಗ ಬಜಾರದಾಗ ಅದೇನ ಹೇಳಿದ್ದೆಲ್ಲ ಅದನ್ನ ತರೋಣ ಅಂತಾ ಫೋನ್ ಮಾಡ್ತಾಳ. ಕರಕೊಂಡೂ ಹೋಗ್ತಾಳ. ಅವ್ವ ನಿನಗ ಈ ಕಾಟನ್ ಸೀರೆ ಮನ್ಯಾಗ ಉಟ್ಕಾಳಕ್ಕ ಛೋಲಾ ಆಗ್ತದಲ್ಲ ಅಂತಾ ಖರೀದಿ ಮಾಡ್ತಾಳ...
ಒಂದದಿನ ಏನಾಯ್ತಿ ಅಂದ್ರ. ಹೀಂಗ ಬಜಾರಕ್ಕ ಹೋದಾಗ ಒಂದು ಜಾಕೆಟ್ ಮತ್ತು ಮಾಪ್ಲರ್ ತಗೊಂಡ್ಲು. ಮನೆಗೆ ಬಂದು ಗಾರ್ಡನ್‌ನಾಗ ಹೂವಿನ ಗಿಡಕ್ಕ ನೀರು ಹಾಕುತ್ತಿದ್ದ ಅವರಪ್ಪನ್ನ ಒಳಗ ಕರೆದು ಪ್ಲ್ಯಾಸ್ಟಿಕ್ ಬ್ಯಾಗ್ ಕೈಗೆ ಕೊಟ್ಲು. ಅದನ್ನ ಬಿಚ್ಚಿನೋಡಿದವ್ರ, ‘ಪಾರ್ವತಿ ಪಡ್ಕೊಂಡ ಬಂದ ಪುಣ್ಯ ಅಂದ್ರ ಇದ ನೋಡ. ಇಂತಹ ಮಗಳ್ನ ಬೆಳಸಿದೆಲ್ಲಾ ನಿನಗ ತುಂಬಾ ಥ್ಯಾಂಕ್ಸ್, ಅಂತಾ ಹೇಳಿ ನನ್ನ ಮೂಗ ಜಗ್ಗಿದರು. ಗೌರಿ ಹೋ.. ಅಂತಾ ನಗೆಯಾಡಿದಳು. ನನಗರ ನಾಚಿಕ ಬಂದು ತಲೆ ತಗ್ಗಿಸಿದೆ.
ಮೊದಲ ಬಾರಿ ನೋಡಿದಾಗ ನೀ ಇಷ್ಟೊಂದು ನಾಚಿಕೊಂಡಿರ್‍ಲಿಲ್ಲ ನೋಡ್ ಪಾರ್ವತಿ. ಬಾಳ ಚಂದ ಕಾಣ್ತಿ ಅಂದಬಿಟ್ರು. ಇಂತಹ ಮಧುರ ಕ್ಷಣಗಳನ್ನು ಮೊಗ ಮೊಗದು ನೀಡುತ್ತಿರುವ ಮಗಳು ಗೌರಿಯಿಂದಾಗಿ ನನ್ನ ಆರೋಗ್ಯ ಕೂಡಾ ಸುಧಾರ್‍ಸೆದ.
ಆದ್ರ ಈ ಕ್ಷಣಗಳು ಕೊನೆ ತನಕ ಅಲ್ಲ ಅಂಬೋದು ಗೊತ್ತು. ಆಕೆ ಮದುವೆಯಾಗಿ ಗಂಡನ ಮನೆಗೆ ಹೋದ್ರ, ಇವೆಲ್ಲ ಬರೀ ನೆನೆಪು. ಆದ್ರ ನಮ್ಮ ಬದುಕಿನ ಬುತ್ತಿಯಲ್ಲಿ ಮಧುರ ಕ್ಷಣಗಳು ಇರ್‍ತಾವಲ್ಲ. ಆಗಾಗ ಬಿಚ್ಚಿ ಸವಿಯಬಹುದಲ್ಲ. ಈ ಬದುಕಿಗೊಂದಿಷ್ಟು ಇರಲಿ ಮಧುರ ಕ್ಷಣಗಳು ಅಂತಾರಲ್ಲ ಹಂಗವಾ.
ಶಾರದಿ ಇವ್ರು ಆಫೀಸಿನಿಂದ ಬಂದ್ಹಾಂಗ ಆತು ಚಹ ಮಾಡಬೇಕು. ನೀ ಬಿಡುವು ಮಾಡ್ಕೊಂಡು ಫೋನ್ ಮಾಡಲ್ಲ. ನಾ ಫೋನ್ ಬಂದ್ ಮಾಡ್ತೇನೆವಾ....





ಈ ಲೇಖನ ಕನ್ನಡಪ್ರಭ ಪತ್ರಿಕೆಯ ಸಖಿ ಪುರವಣಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರಕಟವಾಗಿದೆ.

ಡಬ್ಬಾವಾಲಾಗಳ ಕಮಾಲ್......

ಗೋವಿಂದ ಮಡಿವಾಳರ
ಅಂತೋದ್ಯ ಅಂದರೆ ಆರ್ಥಿಕವಾಗಿ ತೀರಾ ಕೆಳಸ್ತರದಲ್ಲಿ ಇರುವವರನ್ನು ಉದ್ಧಾರ ಮಾಡಬೇಕು. ಅಥವಾ ಉದ್ಯೋಗ ಸೃಷ್ಟಿಸುವುದು ಹೇಗೆ ಎಂದು ರಷ್ಯಿಯಾದ ಲೇಖಕ Ruskin ಬರೆದಿರುವ Small is beautiful ಅಥವಾ ಅದೇ ಪುಸ್ತಕವನ್ನು ಗಾಂಧೀಜಿ ಅವರು ಹಿಂದಿಗೆ ‘ಸರ್ವೋದಯ’ ಎಂದು ಅನುವಾದಿಸಿರುವ ಪುಸ್ತಕವನ್ನು ನಾವು ಓದಬೇಕಾಗಿಲ್ಲ. ತೀರಾ ಸಾಮಾನ್ಯ ಜೀವನಮಟ್ಟದವರ ಉದ್ಧಾರ ಹೇಗೆ ಆಗಬಹುದು ಎಂಬುದನ್ನು ಅರಿಯಬೇಕಾದರೆ ಅದಕ್ಕೆ ಎಂ.ಬಿ.ಎ. ಮಾಡಿ, ಸಂಶೋಧಯನ್ನೂ ಮಾಡಬೇಕಾಗಿಲ್ಲ. ಪಾಂಡಿತ್ಯ ಬೇಕಾಗಿಲ್ಲ. ಮುಂಬಯಿ ನಗರದಲ್ಲಿ ಇರುವ ಡಬ್ಬಾವಾಲಾಗಳ ಬದುಕೇ ಒಂದು ದೊಡ್ಡ ಪ್ರಯೋಗ.
ಇನ್ನು ಕುತೂಹಲದ ಸಂಗತಿ ಅಂದರೆ ೨೦೦೭ರ ಅಂತದ ವೇಳೆಗೆ ಬೆಳಗಾವಿ ನಗರದ ಲಿಂಗರಾಜ ಕಾಲೇಜಿನ ಬಿ.ಬಿ.ಎ.ವಿದ್ಯಾರ್ಥಿಗಳಿಗೆ ವ್ಯಾಪಾರ, ಆಡಳಿತ ಕುರಿತು ವಿಶೇಷ ಉಪನ್ಯಾಸ ನೀಡಲು ಅವರೇ ಬಂದಿದ್ದರು!. ಅಂದು ವಿದ್ಯಾರ್ಥಿಗಳಷ್ಟೇ ಅಲ್ಲ. ನಗರದ ಹಲವಾರು ವ್ಯಾಪಾರಿಗಳು, ಉಪನ್ಯಾಸಕರು ಪ್ರವೇಶ ಶುಲ್ಕ ಕೊಟ್ಟು ಡಬ್ಬಾವಾಲಾಗಳ ಅನುಭವ, ಕಾರ್ಯಶೈಲಿ ಕೇಳಲು ಹೋಗಿದ್ದರು.!!
ಅವರು ಅಂದು ನೀಡಿದ ಉಪನ್ಯಾಸದ ವಿಷಯ ‘ಸಾಮಾನ್ಯ ಜ್ಞಾನದ ಮೂಲಕ ವ್ಯವಸ್ಥಾಪನೆ’
ಮುಂಬಯಿ ನಗರದಲ್ಲಿ ಈ ಡಬ್ಬಾವಾಲಗಳ ಸಂಘಟನೆ ಆರಂಭವಾಗಿದ್ದು ಕೂಡಾ ತುಂಬಾ ಕುತೂಹಲಕಾರಿ ಸಂಗತಿ. ಮುಂಬಯಿ ನಗರದ ಬ್ಯಾಂಕ್ ಒಂದರಲ್ಲಿ ಅಧಿಕಾರಿಯಾಗಿದ್ದ ಪಾರ್ಸಿಯೊಬ್ಬ ಹೊಟೇಲ್ ಊಟಕ್ಕಿಂತ ಮನೆಯ ಊಟವನ್ನೇ ಹೆಚ್ಚು ಇಷ್ಟಪಡುತ್ತಿದ್ದ. ಹೀಗಾಗಿ ಕಚೇರಿಯಲ್ಲಿ ಊಟದ ವೇಳೆಗೆ ಮನೆ ಊಟ ತಂದು ಕೊಡಲು ಒಬ್ಬ ನೌಕರನನ್ನು ನೇಮಿಸಿಕೊಂಡ. ಆ ಡಬ್ಬಾವಾಲಾನಿಗೆ ಬ್ಯಾಂಕ್ ಅಧಿಕಾರಿ ನೀಡುವ ಸಂಬಳ ತೀರಾ ಕಡಿಮೆ ಅನಿಸಲಾರಂಭಿಸಿತು. ಕ್ರಮೇಣ ಡಬ್ಬಾವಾಲಾ ಆದೇ ಪ್ರದೇಶದಲ್ಲಿನ ವಿವಿಧ ಕಚೇರಿ, ಬ್ಯಾಂಕುಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಊಟದ ಡಬ್ಬಾ ತರುವ ಕೆಲಸವನ್ನು ವಹಿಸಿಕೊಂಡು ತನ್ನ ಆದಾಯ ಹೆಚ್ಚಿಸಿಕೊಂಡ. ಆದರೆ ಮುಂದೆ ದಿನಗಳದಂತೆ ಡಬ್ಬಾವಾಲಗಳ ಬೇಡಿಕೆ ಮುಂಬಯಿ ನಗರದಲ್ಲಿ ಹೆಚ್ಚಿಕೊಂಡಿತು. ಹೀಗಾಗಿ ಡಬ್ಬಾವಾಲಾಗಳ ಸಂಖ್ಯೆ ಕೂಡಾ ಕ್ರಮೇಣ ದಿನದಿಂದ ದಿನಕ್ಕೆ ಹೆಚ್ಚಿತು. ಆಗ ಯಾರು ಯಾವ ಪ್ರದೇಶದಲ್ಲಿ ಊಟದ ಡಬ್ಬಾ ಸಾಗಿಸಬೇಕು ಎಂಬ ಸಮಸ್ಯೆ ಉಂಟಾಯಿತು. ಅದಕ್ಕಾಗಿ ೧೮೯೦ರಲ್ಲಿ ಅವರು ಡಬ್ಬಾವಾಲಾಗಳ ಸಂಘ ರಚಿಸಿಕೊಂಡರು. ಸಂಘದ ಮೂಲಕ ಡಬ್ಬಾವಾಲಾಗಳು ಡಬ್ಬಾ ಸಾಗಿಸುವ ಕೆಲಸಕ್ಕಾಗಿ ವಿವಿಧ ಪ್ರದೇಶಗಳನ್ನು ಹಂಚಿಕೊಂಡರು.
ಈಗ ೫೦೦೦ ಡಬ್ಬಾವಾಲಾಗಳು ಇದ್ದಾರೆ. ಅವರು ೨ಲಕ್ಷ ನೌಕರರಿಗೆ ಅವರವರ ಮನೆಯಿಂದ ಊಟದ ಡಬ್ಬಾ ಸಂಗ್ರಹಿಸಿ ಕೇವಲ ೩ ಗಂಟೆಯೊಳಗೆ ಊಟದ ಡಬ್ಬಾಗಳನ್ನು ತಲುಪಿಸಬೇಕಾದ ಸ್ಥಳಕ್ಕೆ ಸರಿಯಾಗಿ ತಲುಪಿಸುತ್ತಾರೆ. ಊಟದ ಡಬ್ಬೆಗಳ ಮೇಲೆ ಹೆಸರು ಇರುವುದಿಲ್ಲ. ಕೇವಲ ಸಂಕೇತಗಳು ಇರುತ್ತವೆ. ಆ ಸಂಕೇತಗಳ ಮೂಲಕ ಸಂಬಂಧಿತರಿಗೆ ಸರಿಯಾದ ಸ್ಥಳಕ್ಕೆ ತಲುಪಿಸುತ್ತಾರೆ. ಈ ತನಕ ಊಟದ ಡಬ್ಬೆಗಳು ಅದಲಿಬದಲಿಯಾದ ಊದಾಹರಣೆಯೇ ಇಲ್ಲ. ಪ್ರತಿಯೊಬ್ಬರು ೨೦ರಿಂದ ೪೦ ಡಬ್ಬಾಗಳನ್ನು ಪ್ರತಿದಿನ ಸಾಗಿಸುತ್ತಾರೆ ಎಂದು ಡಬ್ಬಾವಾಲಾಗಳು ಹೇಳುತ್ತಾರೆ. ಇವರಲ್ಲಿ ಬಹುತೇಕರು ಅನಕ್ಷರಸ್ಥರು ಇದ್ದಾರೆ. ಇನ್ನು ಕೆಲವರು ತಕ್ಕಮಟ್ಟಿಗೆ ಶಿಕ್ಷಣ ಪಡೆದವರು ಇದ್ದಾರೆ. ಇಂತಹವರು ಪ್ರತಿದಿನ ೨ ಲಕ್ಷ ಜನರಿಗೆ ಯಾವುದೇ ತೊಂದರೆ ಇಲ್ಲದೇ ಊಟದ ಡಬ್ಬಾಗಳನ್ನು ನಿಗದಿತ ಸ್ಥಳಕ್ಕೆ ತಲುಪಿಸುತ್ತಾರೆ.
ಇಂದಿನ ಅಧುನಿಕ ದಿನದಲ್ಲೂ ತಮ್ಮ ತನ ಉಳಿಸಿಕೊಂಡಿದ್ದಾರೆ. ಅದೇ ಬಿಳಿ ಪೈಜಾಮು, ಬಿಳಿ ಹಾಫ್ ಶೆರ್ಟ್, ತಲೆ ಮೇಲೊಂದು ಬಿಳಿ ಟೊಪ್ಪಿಗೆ. ಅದು ಅವರು ಸಮವಸ್ತ್ರ ತರ ಇದೆ.
ಅವರೇ ಸ್ಥಾಪಿಸಿಕೊಂಡಿರುವ ಸಂಘದಲ್ಲಿ ಪ್ರತಿ ವರ್ಷ ೩೦ ಸಾವಿರ ಕೋಟಿ ರುಪಾಯಿ ವಹಿವಾಟು ನಡೆಯುತ್ತಿದೆ. ಸಂಘಕ್ಕೆ ಯಾರೂ ಮಾಲಿಕರು ಇಲ್ಲ. ಎಲ್ಲರೂ ನೌಕರರೇ. ಇಲ್ಲಿ ಎಲ್ಲರೂ ಶೇರುದಾರರು. ಪ್ರತಿಯೊಬ್ಬರು ಮಾಸಿಕ ೫ ಸಾವಿರ ರುಪಾಯಿಯನ್ನು ಸಂಬಳ ರೂಪದಲ್ಲಿ ಪಡೆಯುತ್ತಾರೆ. ಪ್ರತಿ ತಿಂಗಳು ೧೫ರಂದು ಸಭೆ ಸೇರಿ ಆ ತಿಂಗಳ ಆದಾಯ, ವೆಚ್ಚ ಕುರಿತು ಚರ್ಚಿಸುತ್ತಾರೆ. ಅವರ ಸಂಘವನ್ನು ‘ನೂತನ ಮುಂಬಯಿ ಟಿಫಿನ್ ಬಾಕ್ಸ್ ಸಪ್ಲಾಯರ್ಸ್ ಚಾರಿಟಿ ಟ್ರಸ್ಟ್’ ಎಂದು ರಚಿಸಿಕೊಂಡಿದ್ದಾರೆ. ಅವರಲ್ಲೇ ಒಬ್ಬರು ನಿಗದಿತ ಅವಧಿಗೆ ಅಧ್ಯಕ್ಷರು, ಕಾರ್ಯದರ್ಶಿ ಹೀಗೆ ಪದಾಧಿಕಾರಿಗಳು ಆಯ್ಕೆ ಆಗುತ್ತಾರೆ. ಅವರೆಲ್ಲ ಟ್ರಸ್ಟ್ನ ವ್ಯವಹಾರ ನೋಡಿಕೊಳ್ಳುತ್ತಾರೆ. ಕಳೆದ ೧೧೭ ವರ್ಷಗಳಿಂದ ಇದೇ ರೀತಿಯಾಗಿ ಶಿಸ್ತಿನಿಂದ ನಡೆದುಕೊಂಡು ಬಂದಿದೆ ಎಂದು ಡಬ್ಬಾವಾಲಾಗಳು ಹೇಳುತ್ತಾರೆ.
ಕುತೂಹಲದ ಸಂಗತಿ:ಇಷ್ಟೆಲ್ಲ ವ್ಯವಸ್ಥಿತವಾಗಿ, ಶಿಸ್ತಿನಿಂದ ಕಾರ್ಯನಿರ್ವಹಿಸುವ ಇವರು ಮೂಲತ ಶಿವಾಜಿ ಮಹಾರಾಜರ ಸೈನಿಕರಾಗಿದ್ದವರ ವಂಶಸ್ತರು ಎಂದು ಹೇಳಲಾಗುತ್ತಿದೆ. ಶಿವಾಜಿ ಮಹಾರಾಜರು ಸೈನ್ಯ ಕಟ್ಟಿದ್ದು ಕಾಡಿನಲ್ಲಿ. ಅಲ್ಲಿ ಒಂದು ಗುಂಪಿಗೆ ಸೇರಿದ ಜನರನ್ನು ಆಯ್ದು ಅವರಿಗೆ ಯುದ್ಧ ಕಲೆ ತರಬೇತಿ ನೀಡಿದ್ದರು ಎಂಬ ಇತಿಹಾಸ ಇದೆ. ಅವರು ತುಂಬಾ ಶ್ರಮಜೀವಿಗಳು, ನಿಷ್ಟಾವಂತರು ಎಂಬ ಕಾರಣಕ್ಕೆ ಶಿವಾಜಿ ಮಹಾರಾಜರು ಈ ಗುಂಪಿನ ಜನರನ್ನು ಆಯ್ಕೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಚಾರ್ಲ್ಸ್ ಭೇಟಿ:ಇವರು ಎಷ್ಟೊಂದು ಕೆಲಸ ನಿಷ್ಟರು ಎಂದರೆ ಈಗ್ಗೆ ಕೆಲವು ವರ್ಷಗಳ ಹಿಂದೆ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂಬಯಿಗೆ ಬಂದಿದ್ದರು. ಇವರ ಕಾರ್ಯಕ್ಷಮತೆ ಕೇಳಿ ಅವರನ್ನು ಭೇಟಿಯಾಗಲು ಇಚ್ಚೆ ವ್ಯಕ್ತಪಡಿಸಿದರು. ಆದರೆ ಡಬ್ಬಾವಾಲಾಗಳು ತಮ್ಮ ಕೆಲಸದ ವೇಳೆಯಲ್ಲಿ ಅವರ ಬಳಿ ಹೋಗಲು ನೀರಾಕರಿಸಿದರು. ತಾವು ನಿಗದಿಪಡಿಸುವ ವೇಳೆಗೆ ಭೇಟಿಯಾಗುವುದಾದರೆ ಭೇಟಿ ಆಗುತ್ತೇವೆ ಎಂದು ಡಬ್ಬಾವಾಲಗಳು ತಿಳಿಸಿದ್ದರು. ಅದಕ್ಕೆ ಒಪ್ಪಿಕೊಂಡ ರಾಜಕುಮಾರ ಚಾರ್ಲ್ಸ್, ಡಬ್ಬಾವಾಲಾಗಳು ಕೆಲಸ ಮುಗಿದ ನಂತರ ಅವರೇ ನಿಗದಿಪಡಿಸಿದ ಸಮಯದಲ್ಲಿ ಅವರನ್ನು ಭೇಟಿಯಾಗಿದ್ದರು. ಮುಂದೆ ಚಾರ್ಲ್ಸ್ ತನ್ನ ಮದುವೆ ಸಮಾರಂಭಕ್ಕೆ ಡಬ್ಬಾವಾಲಾಗಳಿಗೆ ವಿಶೇಷವಾಗಿ ಆಮಂತ್ರಣ ಪತ್ರ ಕಳಿಸಿ ಆಹ್ವಾನಿಸಿದ್ದರು. ಇದು ಕೂಡಾ ಅವರ ಕರ್ತವ್ಯ ಪ್ರಜ್ಞೆ ಮತ್ತು ಶಿಸ್ಸಿಗೆ ಸಂದ ಗೌರವ. ಇದು ಇತರರಿಗೆ ಮಾದರಿ ಕೂಡಾ.
ಚಾರ್ಲ್ಸ್ ಅವರು ಡಬ್ಬಾವಾಲಾಗಳನ್ನು ಭೇಟಿಯಾದ ನಂತರವೇ ಮುಂಬಯಿಯ ಡಬ್ಬಾವಾಲಾಗಳನ್ನು ಭಾರತೀಯರು ಗುರುತಿಸಿದರು ಎಂಬ ಸಂಗತಿ ಭಾರತೀಯರ ಪ್ರಜ್ಞೆಗೆ ಸಾಕ್ಷಿ.

Saturday, January 12, 2008

ಅವನಿಗೆ ಸಂಗಾತಿ, ಉಳಿದವರಿಗೆ ಸಾಕ್ಷಿ


ಗೋವಿಂದ ಮಡಿವಾಳರ

ಒಬ್ಬ ಮಹಿಳೆ ತನ್ನ ಪತಿಯ ಆಸ್ತಿ ತನಗೆ ಸಿಕ್ಕೀತೆ ಎಂಬ ನಿರೀಕ್ಷೆಯಲ್ಲಿ ನ್ಯಾಯಾಲಯದ ಬೆಂಚೊಂದರ ಮೇಲೆ ಕುಳಿತಿದ್ದಾಳೆ. ಇನ್ನೊಂದೆಡೆ ಅವಳ ಆಸ್ತಿ ಹಕ್ಕಿನ ಹೋರಾಟಕ್ಕೆ ಕೋರ್ಟ್ ಅಂತಿಮ ತೆರೆ ಎಳೆದು ನಮ್ಮ ಪರ ಜಯ ಸಿಕ್ಕೀತು ಎಂದು ಕೆಲವರು ಕುಳಿತ್ತಿದ್ದಾರೆ.
ಆಗ ನ್ಯಾಯಾಧೀಶರು.... ಈ ಲಗ್ನಪತ್ರ ನಿಮ್ಮ ಬಳಿ ಹೇಗೆ ಬಂತು?. ಅದೂ ನಿಮ್ಮ ಅಥವಾ ನಿಮ್ಮ ಸಂಬಂಧಿಗಳ ಮದುವೆಯ ಲಗ್ನಪತ್ರವೂ ಅಲ್ಲ. ಮದುವೆಯಾಗಿ ಇಷ್ಟು ವರ್ಷಗಳ ತನಕ ನಿಮ್ಮ ಬಳಿ ಹೇಗೆ ಉಳಿಯಿತು? ಎಂದು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಬಂದಿದ್ದ ರಾಮನಾಥ ಬನಶಂಕರಿ ಅವರಿಗೆ ನ್ಯಾಯಾಧೀಶರೇ ಸ್ವತಹ ಪ್ರಶ್ನಿಸಿದರು.
ಸರ್ ನನಗೆ ಯಾರೇ ತಮ್ಮ ಮದುವೆ ಕರೆಯೋಲೆ ಕಳಿಸಲಿ ಅಥವಾ ಹುಟ್ಟುಹಬ್ಬದ ಆಮಂತ್ರಣ ಪತ್ರಿಕೆ ಕಳಿಸಿದರೂ ಅವುಗಳನ್ನು ಸಂಗ್ರಹಿಸಿ ಇಡುವ ಹವ್ಯಾಸ ಇದೆ. ನನ್ನ ಬಳಿ ಸಾವಿರಾರು ಲಗ್ನ ಪತ್ರಿಕೆ, ಸ್ನೇಹಿತರು ಬರೆದ ಪತ್ರ, ಹುಟ್ಟುಹಬ್ಬದ, ಗೃಹಪ್ರವೇಶದ ಆಮಂತ್ರಣ ಪತ್ರ ಹೀಗೆ ಹಲವಾರು ಪತ್ರಗಳು ನಮ್ಮ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದೇನೆ ಎಂದರು.
ಹಾಗಾದರೆ ಈ ಲಗ್ನ ಪತ್ರದ ಹಿಂದಿನ ದಿನಾಂಕಿನ ಒಂದು ನೂರು, ಮತ್ತು ಅದರ ಪೂರ್ವದಲ್ಲಿನ ಒಂದು ನೂರು ಪತ್ರಗಳನ್ನ ಅಥವಾ ಲಗ್ನ ಪತ್ರಿಕೆಗಳನ್ನು ಕೋರ್ಟಿಗೆ ಹಾಜರ ಮಾಡಲಿಕ್ಕೆ ಸಾಧ್ಯೆನಾ ನಿಮಗೆ? ಎಂದು ನ್ಯಾಯಾಧೀಶರು ಕೇಳಿದರು.
ಖಂಡಿತ ಮಾಡ್ತೇನ್ರಿ ಸರ್ ಎಂದು ರಾಮನಾಥ ಹೇಳಿದರು.
ನಿಗದಿತ ದಿನದಂದು, ನಿಖರವಾಗಿ ನ್ಯಾಯಾಧೀಶರ ಕೇಳಿದಷ್ಟನ್ನು ಸ್ನೇಹಿತರು ಬರೆದ ಪತ್ರಗಳನ್ನು, ಕಳಿಸಿದ ಲಗ್ನ ಪತ್ರಿಕೆಗಳನ್ನು ತಂದು ಕೋರ್ಟ್ ಮುಂದೆ ಹಾಜರಪಡಿಸಿದ. ಅದನ್ನು ಪರಿಶೀಲಿಸಿದ ನ್ಯಾಯಾಧೀಶರು, ಎಲ್ಲ ಪತ್ರಗಳು ಸರಿಯಾಗಿವೆ. ಈಗ ನೀವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಾಜರ ಪಡಿಸಿರುವ ಲಗ್ನ ಪತ್ರವನ್ನು ಸಾಕ್ಷಿ ಎಂದು ಕೋರ್ಟ್ ಪರಿಗಣಿಸುತ್ತಿದೆ ಎಂದರು.
ಮುಂದೆ ಮಹಿಳೆ ಪರ ಕೋರ್ಟ್ ತೀರ್ಪು ನೀಡಿತು. ಅದರಲ್ಲಿ ಆ ಮಹಿಳೆ ಪತಿಯ ಆಸ್ತಿ ಪಡೆಯಲು ಅರ್ಹತೆ ಹೊಂದಿದ್ದಾಳೆ. ಅವಳ ಪಾಲಿನ ಆಸ್ತಿಯನ್ನು ಪತಿಯ ಮನೆಯವರು ಕೊಡಬೇಕು ಎಂದು ಹೇಳಲಾಗಿತ್ತು.
ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಚಿಂತಾಕ್ರಾಂತಳಾಗಿ ಕುಳಿತಿದ್ದ ಮಹಿಳೆಯ ಮೊಗದಲ್ಲಿ ಜೀವಕಳೆ ಇಣಿಕಿ ಕಣ್ಣು ಮಿಟಿಕಿತು.
ಇದು ಕತೆ ಅಲ್ಲ. ಈಗ್ಗೆ ಕೆಲವು ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಪ್ರಮುಖ ನಗರದ ಒಂದು ಕೋರ್ಟ್‌ನಲ್ಲಿ ನಡೆದ ಘಟನೆ. ಹವ್ಯಾಸವೂ ಹರ್ಷ ತಂದೀತು ಎಂಬುದಕ್ಕೆ ಇದು ಒಂದು ಸಾಕ್ಷಿ.
ಆ ಮಹಿಳೆ ಉನ್ನತ ಶಿಕ್ಷಣ ಪಡೆದವಳು. ಸ್ವಂತ ಉದ್ಯೋಗ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹ ಆಗಿದ್ದಳು. ಮದುವೆಯಾದ ಎರಡೇ ವರ್ಷದಲ್ಲಿ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಳು. ಎರಡು ವರ್ಷ ಜೀವನ ನಡೆಸಿದ ನಂತರವೂ ಅವಳ ಬಳಿ ಪತಿಯ ಜೊತೆ ಇದ್ದ ಒಂದೇ ಒಂದು ಫೋಟೋ ಇಟ್ಟುಕೊಂಡಿರಲಿಲ್ಲ. ಲಗ್ನಪತ್ರ ಇದ್ದರೂ ಅದು ಪತಿಯ ಮನೆಯವರ ಬಳಿ ಇತ್ತು. ಅವರಿಬ್ಬರ ಸಾಕ್ಷಿಯಾಗಿ ಒಂದು ಮಗು ಕೂಡಾ ಇರಲಿಲ್ಲ. ಹೀಗೆ ಅವಳು ಬರಿಗೈಲೆ ಇದ್ದಳು. ಆಸ್ತಿ ಕೇಳುವ ಅನಿವಾರ್ಯತೆ ಅವಳಿಗೆ ಬಂದಾಗ ಅವಳ ನೆರವಿಗೆ ಬಂದದ್ದು ಕೇವಲ ಒಂದು ಲಗ್ನ ಪತ್ರ. ಅದು ಅವಳ ಹಕ್ಕಿನ ಸಾಕ್ಷಿಯಾಗಿ ನಿಂತಿತು. ಪತಿಯ ಮನೆಯಿಂದ ಅವಳಿಗೆ ಸಿಗಬೇಕಾದ ನ್ಯಾಯಯುತ ಆಸ್ತಿ ಪಾಲು ಸಿಕ್ಕಿತು. ಅದು ಅವಳ ಜೀವನಕ್ಕೆ ಆಸರೆಯಾಯಿತು.
ಟಿ ನಡೆದದ್ದು ಇಷ್ಟೇ:ತೀರಾ ಚಿಕ್ಕ ವಯಸ್ಸಿನಲ್ಲೇ ಪತಿ ಕಳೆದುಕೊಂಡ ಅವಳಿಗೆ ಆ ಕ್ಷಣಕ್ಕೆ ಅತ್ತೆ-ಮಾವರ ಮನೆಗಿಂತ ಅಪ್ಪ-ಅಮ್ಮನ ಮನೆ ಸುರಕ್ಷೆ ಅನಿಸಿತು. ಅಲ್ಲೇ ವಾಸವಾಗಿದ್ದಳು. ಮುಂದೆ ಕೆಲ ವರ್ಷಗಳ ನಂತರ ತಂದೆ-ತಾಯಿಗೆ ವಯಸ್ಸಾದ ನಂತರ, ಅಣ್ಣಂದಿರ ಹೆಂಡಂದಿರ ಕಿರಿಕಿರಿ ಆರಂಭವಾಯಿತು. ಆಗ ಅವಳಿಗೆ ತವರು ಬೇಸರವಾಯಿತು. ಪತಿ ಮನೆ ಒಂದೇ ಗತಿ. ಆದರೆ ಪತಿ ತೀರಿಕೊಂಡ ನಂತರ ಒಂದೇ ಒಂದು ಬಾರಿ ಅವಳು ಪತಿಯ ಮನೆಗೆ ಹೋಗಿಬಂದವಳಲ್ಲ. ಅವರ ಸಂಪರ್ಕವೇ ಕಡಿದುಹೋಗಿತ್ತು. ಆದರೆ ಇಷ್ಟು ವರ್ಷಗಳ ನಂತರ ಈಗ ಅಲ್ಲಿ ಹೋದರೆ ನನ್ನನ್ನು ಅವರು ಹೇಗೆ ಸ್ವೀಕರಿಸಿಯಾರು? ಎಂಬ ಮಾನಸಿಕ ಹೋಯ್ದಾಟದಲ್ಲಿ ಒಂದು ನಿರ್ಣಯಕ್ಕೆ ಬಂದಳು. ತನ್ನ ಪತಿಗೆ ಬರಬೇಕಾದ ಆಸ್ತಿ ಪಡೆದು ಪ್ರತ್ಯೇಕವಾಗಿ ಜೀವನ ನಡೆಸುವುದೇ ಸೂಕ್ತ ಎಂದು. ಅಸ್ತಿ ಕೇಳಿ ಕೋರ್ಟ್‌ನಲ್ಲಿ ದಾವೆ ಹೂಡಿದಳು. ಆಗ ಅವಳು ಪತಿಯ ಆಸ್ತಿಗೆ ಹಕ್ಕುದಾರಳು ಎಂದು ಒಂದೇ ಒಂದು ಸಾಕ್ಷಿ ಇಲ್ಲದೇ ಪೇಚಾಡುತ್ತಿದ್ದಳು. ಮದುವೆಯಾಗಿ ಎರಡು ವರ್ಷ ಜೀವನ ನಡೆಸಿದರೂ ಮಗು ಕೂಡಾ ಆಗಿರಲಿಲ್ಲ. ಮಗು ಇದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಹೀಗೆ ಯಾವುದೇ ಸಾಕ್ಷಿ ಇಲ್ಲದ ಪರಿಸ್ಥಿತಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಇನ್ನೇನು ಇತ್ಯರ್ಥ ಆಗುತ್ತದೆ. ಆಸ್ತಿ ಸಿಗುವುದಿಲ್ಲ. ಪತಿ ಸತ್ತಾಗಲೇ ಎಂತಹದೇ ಕಷ್ಟಗಳು ಎದುರಾಗಿದ್ದರೂ ಅಲ್ಲೇ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಚಿಂತಾಕ್ರಾಂತಳಾಗಿದ್ದಾಗ ಅವಳಿಗೆ ಆಕಸ್ಮಿಕವಾಗಿ ಅವಳ ತಂದೆಗೆ ಪರಿಚಿತರಾದ ರಾಮನಾಥ ಬನಶಂಕರಿ ಅವರು ಹೀಗೆ ಯಾವುದೋ ಒಂದು ಪ್ರಸಂಗದಲ್ಲಿ ಹಳ್ಳಿಯೊಂದರಲ್ಲಿ ಭೇಟಿಯಾದರು. ಆಗ ಔಪಚಾರಿಕವಾಗಿ ಮಾತನಾಡುತ್ತ, ತನ್ನ ಕಷ್ಟ ಹೇಳಿಕೊಂಡಳು. ಆಗ ಅವರು ತನ್ನ ಬಳಿ ಅವಳ ಲಗ್ನದ ವೇಳೆಯಲ್ಲಿ ಅವಳ ತಂದೆಯವರು ಕಳಿಸಿದ್ದ ಲಗ್ನಪತ್ರಿಕೆ ಇದೆ ಎಂದು ಹೇಳಿದರು. ಆ ಸುದ್ದಿ ಕೇಳಿ ಅವಳಿಗೆ ಹೋದ ಜೀವ ಬಂದಂತಾಯಿತು. ಅವಳು ತೀರ ದಯನೀಯವಾಗಿ ಕೇಳಿಕೊಂಡಳು. ಆ ಲಗ್ನಪತ್ರ ತಂದು ಕೊಡಿ, ಕೋರ್ಟ್‌ಲ್ಲಿ ಹಾಜರ ಪಡಿಸಿ ನನ್ನ ಪಾಲಿಗೆ ಬರಬೇಕಾದ ಆಸ್ತಿಯನ್ನು ಪಡೆದು ಸ್ವತಂತ್ರ ಜೀವನ ನಡೆಸುತ್ತೇನೆ ಎಂದಳು. ರಾಮನಾಥ ಅವರು ಒಪ್ಪಿ, ಅವಳಿಗೆ ಲಗ್ನ ಪತ್ರದ ಪ್ರತಿಯನ್ನು ತಂದು ಕೊಟ್ಟರು. ಕೋರ್ಟ್‌ನಲ್ಲಿ ಹಾಜರಪಡಿಸಿದ್ದರು.
ಹೀಗೆ ಒಂದು ಲಗ್ನ ಪತ್ರಿಕೆ ಒಬ್ಬ ಮಹಿಳೆಗೆ ಕೋರ್ಟ್‌ನಲ್ಲಿ ನ್ಯಾಯ ಕೊಡಿಸಲು ಸಾಕ್ಷಿಯಾಯಿತು.
ಈ ಲಗ್ನ ಪತ್ರವನ್ನು ಸಂಗ್ರಹಿಸಿ ಇಟ್ಟ ರಾಮನಾಥ ಅವರು ಮುಂದೊಂದು ದಿನ ಅದು ಇಂತಹ ಮಹತ್ವದ ಸಹಾಯಕ್ಕೆ ಸಾಕ್ಷಿಯಾಗಬಹುದು ಎಂದು ಸಂಗ್ರಹಿಸಿ ಇಟ್ಟವರಲ್ಲ. ಕೇವಲ ಪತ್ರಗಳನ್ನು ಸಂಗ್ರಹಿಸುವ ಹವ್ಯಾಸ ಅಷ್ಟೇ. ಇವರ ಬಳಿ ಸಾವಿರಾರು ಇಂತಹ ಪತ್ರಗಳು ಇವೆ. ಅವುಗಳಲ್ಲಿ ಸ್ನೇಹಿತರು, ಸಂಬಂಧಿಕರು ಬರೆದ ಪತ್ರಗಳು, ಲಗ್ನ ಪತ್ರಗಳು, ಮಕ್ಕಳು ಹುಟ್ಟಿದ ಸಂತೋಷದ ಸಮಾಚಾರ ತಿಳಿಸಿದ ಪತ್ರಗಳು, ನಿಧನ ವಾರ್ತೆ ಹೊತ್ತು ತಂದ ಪತ್ರಗಳು. ಗೃಹ ಪ್ರವೇಶ ಆಮಂತ್ರಣ ಪತ್ರಗಳು ಹೀಗೆ ಹಲವಾರು ವಿಧದ ಪತ್ರಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಅವರು ಬರೀ ಪತ್ರಗಳನ್ನು ಅಷ್ಟೇ ಸಂಗ್ರಹಿಸಿಲ್ಲ. ಅಂಚೆ ಚೀಟಿ, ಕಲಾತ್ಮಕವಾದ ಕ್ಯಾಲೆಂಡರ್‌ಗಳನ್ನು, ಅಪರೂಪದ ಭಾವಚಿತ್ರಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ವೃತ್ತಿಯಿಂದ ಅವರು ಒಬ್ಬ ಸರಕಾರಿ ನೌಕರರು.

ಮೈಲಿಗೆಯಲ್ಲಿ ಮಮತೆ ಜಿನುಗಿದಾಗ....

ಗೋವಿಂದ ಮಡಿವಾಳರ

ನಾನೊಂದು ಮರವಾಗಿದ್ದರೆ
ಹಕ್ಕಿ ಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ
ಬಿಸಿಲು ನನ್ನ ಅಪ್ಪಿಕೊಂಡಾಗ
ನೆರಳಿಗಾಗುತ್ತಿರಲಿಲ್ಲ ಮೈಲಿಗೆ....
ಇದು ಮಾಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಯೊಂದರ ಮೊದಲ ಎರಡು ಪ್ಯಾರಾ. ಈ ಕವಿತೆ ಓದಿದಾಗ ನನಗೆ ನನ್ನ ಕಾಲೇಜು ದಿನಗಳಲ್ಲಿ ಪರಿಚಯವಾದ ಒಂದು ಕುಟುಂಬದ ನೆನಪಾಯಿತು.
ಅದೊಂದು ವೈಷ್ಣವ ಸಂಪ್ರದಾಯ ಮನೆ. ಆ ಮನೆಯಲ್ಲಿ ಸುಮಾರು ೬೦ರ ಆಸುಪಾಸಿನ ವಯಸ್ಸಿನ ಅಜ್ಜಿ. ಸದಾ ಸೀರೆ ಉಟ್ಟು ಕಚ್ಚೆ ಹಾಕಿರುತ್ತಿದ್ದರು. ವೈಷ್ಣವ ಸಂಪ್ರದಾಯ ಅಂದರೆ ಕೇಳಬೇಕೆ.ಪೂಜೆ, ವೃತ ಎಲ್ಲವೂ ನಿಯಮಿತವಾಗಿ ನಡೆಯಲೇ ಬೇಕು. ಇಂತಹ ಮಹಿಳೆಯ ಮಗನೊಬ್ಬ ಕಾಲೇಜು ದಿನಗಳಲ್ಲಿ ನನಗೆ ಗ್ರಂಥಾಲಯದಲ್ಲಿ ಪರಿಚಯವಾದ. ಆತನ ಪರಿಚಯ, ಸ್ನೇಹ ಮುಂದೆ ಆತ್ಮೀಯತೆಗೆ ತಿರುಗಿತು. ಅವರು ಮನೆಗೆ ಆಗಾಗ ಹೋಗಿ ಬರುತ್ತಿದ್ದೆ. ಆಗ ಅವರ ತಾಯಿಯ ಪರಿಚಯವೂ ಆಯಿತು.
ದೂರದ ಹಳ್ಳಿಯಿಂದ ಶಿಕ್ಷಣಕ್ಕೆಂದೇ ನಾನು ಧಾರವಾಡದಂತಹ ನಗರಕ್ಕೆ ಬಂದವನು. ಬಾಡಿಗೆ ರೂಮಿನಲ್ಲಿದ್ದು ಸ್ವತಃ ಅಡಿಗೆ ಮಾಡಿಕೊಂಡು ಊಟ ಮಾಡಿ ಶಿಕ್ಷಣ ಪಡೆಯುತ್ತಿದ್ದೆ. ಇದು ಅವರಿಗೆ ಗೊತ್ತಿತ್ತು. ಹೀಗಾಗಿ ಅವರು ಹಬ್ಬದ ದಿನಗಳಲ್ಲಿ ಊಟಕ್ಕೆ ಹೇಳುತ್ತಿದ್ದರು. ಒತ್ತಾಯದ ಮೇರೆಗೆ ಊಟಕ್ಕೆ ಹೋಗುತ್ತಿದ್ದೆ. ಆ ತಾಯಿ ತೀರಾ ಮಡಿವಂತರು. ಊಟಕ್ಕೆ ಕೊಡುವಾಗ ಊಟದ ತಾಟನ್ನು ದೂರದಿಂದಲೇ ನನ್ನತ್ತ ನೂಕುತ್ತಿದ್ದರು. ಏನಾದರು ಪ್ರಸಾದ ಕೊಡುವದಿದ್ದರೆ ನನ್ನ ಕೈಗೆ ತಾಗಿದ ಗಾಳಿ ಕೂಡಾ ಅವರಿಗೆ ಸೋಂಕಬಾರದು ಎಂಬ ರೀತಿಯಲ್ಲಿ ಕೈ ಎತ್ತರಿಸಿ ಹಾಕುತ್ತಿದ್ದರು. ನಾನು ಕೂಡಾ ಸಂಕೋಚವಿಲ್ಲದೇ ಕೈ ಒಡ್ಡಿ ಸ್ವೀಕರಿಸುತ್ತಿದ್ದೆ. ಅವರು ಹಾಗೆ ಹಾಕುವಾಗಲೆಲ್ಲ ನನಗೆ ಒಳಗೊಳಗೆ ನಗು, ಕೋಪ ಒಟ್ಟೊಟ್ಟಿಗೆ ಬರುತ್ತಿತ್ತು. ಆದರೂ ನಾನು ಆ ಬಗ್ಗೆ ಪ್ರತಿಭಟಿಸಲಿಲ್ಲ. ಯಾಕಂತ ನನಗೆ ಇಂದಿಗೂ ಜಿಜ್ಞಾಸೆ.
ಹೀಗೆ ದಿನಗಳು ಉರುಳಿದಾಗ ನಾನು ಅವರ ಮಗನ ಜೊತೆ ಪ್ರತಿ ಭಾನುವಾರ ಮನೆಗೆ ಹೋಗದಿದ್ದರೆ,ಯಾಕೆ ಆ ಹುಡುಗ ಇವತ್ತು ಮನೆಗೆ ಬಂದಿಲ್ಲ?, ನಿನಗೆ ಭೇಟಿ ಆಗಿಲ್ಲೇನು? ಎಂದು ಪ್ರಶ್ನಿಸುತ್ತಿದ್ದರಂತೆ.
ಭಾನುವಾರದ ಮರುದಿನ ಗ್ರಂಥಾಲಯದಲ್ಲಿ ಸಿಗುತ್ತಿದ್ದ ಸ್ನೇಹಿತ, ಏ ಮಹಾರಾಯ ಮನೆಯಾಗ ಅಮ್ಮಾ ಕೇಳುತ್ತಿದ್ದಳು. ನೀನು ಭಾನುವಾರ ಮನೆಗೆ ಬಾರದಿದ್ದರೆ ಯಾಕ ಬಂದಿಲ್ಲ ಅಂತಾ. ಬಂದು ಹೋಗು ಎಂದು ಹೇಳುತ್ತಿದ್ದರು. ಮರು ದಿನ ಮನೆಗೆ ಹೋದರೆ, ಏನೋ ಮಹಾಶಯ ನೀನು ಭಾನುವಾರ ಮನೆಗೆ ಬಾರದಷ್ಟು ಕೆಲಸ ಒಟ್ಟಿತ್ತೇನು? ಮಬ್ಬ, ಹಂಗ ತಪ್ಪಿಸಬಾರದು ಎಂದು ತಾಕೀತು ಮಾಡುತ್ತಿದ್ದರು. ಕುಂತ್ಗೋ ಎಂದು ಹೇಳಿ ಮನೆಯಲ್ಲಿ ಮಾಡಿಟ್ಟಿದ್ದ ಬೇಸೆನ್ ಉಂಡಿ ತಂದು ಕೈ ಮೇಲೆತ್ತಿ ನನ್ನ ಕೈಗೆ ಹಾಕುತ್ತಿದ್ದರು. ಇಲ್ಲವೇ ಒಂದು ಚಿಕ್ಕದಾದ ಪ್ಲೇಟಿನಲ್ಲಿ ಇಟ್ಟು ದೂರದಲ್ಲೇ ಕುಳಿತು ಪ್ಲೇಟನ್ನು ನನ್ನತ್ತ ನೂಕುತ್ತಿದ್ದರು. ಆಗ ನಾನು ಖುಷಿಯಿಂದಲೇ ತೆಗೆದುಕೊಂಡು ತಿನ್ನುತ್ತಿದ್ದೆ. ಮನೆಗೆ ಹೊರಟು ನಿಂತಾಗ, ಆಗಾಗ ಬರ್ತಾ ಇರು ಎಂದು ಹೇಳುತ್ತಿದ್ದರು. ಆಗ... ನನಗೆ ಒಂದು ರೀತಿ ನನ್ನ ಪಾಲಕರು, ನಾನು ನನ್ನೂರಿನಿಂದ ಧಾರವಾಡಕ್ಕೆ ಹೊರಟು ನಿಂತಾಗ ಹೇಳುತ್ತಿದ್ದದ್ದು ನೆನಪಾಗುತ್ತಿತ್ತು. ಹೀಗೆ ಅವರಲ್ಲಿ ನನ್ನ ಪಾಲಕರನ್ನು ಕಾಣಲಾರಂಭಿಸಿದೆ. ಅದಕ್ಕಾಗಿಯೋ ಏನೋ. ನನ್ನ ಕೈ ಗಾಳಿ ತಾಗಿದರೂ ಮೈಲಿಗೆ ಆಗುತ್ತದೆ ಎಂದು ಎಚ್ಚರ ವಹಿಸಿಕೊಂಡರೂ ನನಗೆ ಅದು ಅವಮಾನ ಅನ್ನಿಸಲೇ ಇಲ್ಲ. ಅಲ್ಲಿ ಜಾತಿಗಿಂತ ಮಮತೆ ಪ್ರಬಲವಾಯಿತೋ ಏನೋ ಎಂದು ಅನಿಸುತ್ತದೆ. ನನ್ನ ಬಂಡಾಯದ ಮನಸ್ಸು ತಣ್ಣಗೆ ಇರುತ್ತಿತ್ತು. ಅದಕ್ಕೆ ಅಂತಾ ಕಾಣಿಸುತ್ತದೆ ಮಮತೆ ಮುಂದೆ ಜಾತಿ ಫೇಲು ಅಂತಾ.
ಒಂದು ದಿನ ಹೀಗೆ ಕುಳಿತಿದ್ದಾಗ, ಆ ಗೆಳೆಯ ನನ್ನ ತಾಯಿ ನಿನಗೆ ಊಟಕ್ಕೆ ನೀಡುವ ರೀತಿ ಬೇಸರ ತರುತ್ತಿರಬೇಕು ಅಲ್ವ. ಖಂಡಿತ ನಿನಗೆ ಆಗೇ ಆಗುತ್ತದೆ. ನನಗೆ ಗೊತ್ತು. ಆದರೂ ನೀನು ಲಕ್ಕಿ ಕಣೋ ಎಂದು ಹೇಳಿ ದೀರ್ಘ ನಿಟ್ಟಿಸುರಿ ಬಿಟ್ಟ..... ನೀನು ಎಂದಾದರು ಗಮನಿಸಿಯಾ ನನ್ನ ತಾಯಿ ನನ್ನ ಪಕ್ಕದಲ್ಲಿ ಕುಳಿತ ಮಾತನಾಡುವುದು, ಅಥವಾ ನಾನು ಅವಳ ಬಳಿ ನಿಂತು ಮಾತನಾಡುವುದು. ನಾನು ಎಲ್ಲರೊಂದಿಗೆ ಬೆರೆತು ಒಡಾಡುವುದರಿಂದ ನನ್ನನ್ನು ನನ್ನ ತಾಯಿ ತನ್ನ ಹತ್ತಿರ ಬರಿಸಿಕೊಳ್ಳುವುದಿಲ್ಲ. ನನ್ನ ಬಟ್ಟೆ ಕೂಡಾ ತೊಳೆಯುವುದಿಲ್ಲ. ನನ್ನ ವೈನಿ ಬಂದ ಮೇಲೆ ಅವರೇ ನನಗೆ ಊಟಕ್ಕೆ ಹಾಕುತ್ತಾರೆ.ಬಟ್ಟೆ ತೊಳೆದುಕೊಡುತ್ತಾರೆ. ಹತ್ತಿರ ಹೋದರೆ ನಮ್ಮ ತಾಯಿ ಸರದ ನಿಲ್ಲೋ ಆ ಕಡೆ ಅಂತಾ ಹೇಳ್ತಾರ. ಅಷ್ಟೊಂದು ಕಟ್ಟುನಿಟ್ಟಿನ ವೃತ ಅವರದು. ಅದಕ್ಕೆ ಬೇಜಾರ ಮಾಡಿಕೋ ಬೇಡ ಅಂತಾ ಸಮಾಧಾನ ಪಡಿಸಿದ.
ಹೋಗಲಿ ಬಿಡು. ಅಮ್ಮನ ಸ್ಥಾನದಲ್ಲಿ ಅತ್ತಿಗೆ ಇದ್ದಾಳಲ್ಲ ಎಂದು ಸಮಾಧಾನ ಮಾಡಿದೆ.
ಹಾಗಲ್ಲೋ, ನೀನು ವಾರದಲ್ಲಿ ಒಂದು ದಿನ ಬಾರದಿದ್ದರೆ ಚಡಪಡಿಸುತ್ತಾರೆ. ಬಂದಕೂಡಲೇ ಉಪಚಾರ ಮಾಡುತ್ತಾರೆ. ಓದು ಅಂತಾರ. ನನ್ನ ಬಗ್ಗೆ ಕಾಳಜಿನ ಮಾಡೋದಿಲ್ಲ. ಆದರೂ ಅವರು ನನ್ನ ತಾಯಿ. ಅವರು ಇನ್ನೊಬ್ಬರನ್ನು ಗೌರವಿಸುವ ರೀತಿ ಐತಲ್ಲ ಅದು ನನಗೆ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ ಎಂದ.
ಅಷ್ಟೆಲ್ಲ ಮಾತಾಡಿದ ನಂತರ ನನಗೆ ಏನೂ ಹೆಚ್ಚು ಮಾತಾಡಲು ಮನಸ್ಸಾಗಲಿಲ್ಲ. ಸುಮ್ಮನೆ ಆತನ ಕೈಯನ್ನು ನನ್ನ ಕೈಗೆ ತೆಗೆದುಕೊಂಡು ಅದುಮಿ ಕೈ ತಟ್ಟಿ ತರಗತಿ ಕಡೆಗೆ ಹೋದೆ. ನಂತರ ನನ್ನ ರೂಮಿಗೆ ಬಂದ ಮೇಲೆ ಅವನ ಮಾತುಗಳೇ ಮನಸ್ಸಿನಲ್ಲಿ ಗಿರಕಿ ಹೊಡೆಯಲಾರಂಭಿಸಿದವು.
ಅವರಿಗೆ ನಾನು ಮಗನಲ್ಲಿ, ಬಳಗದವನಲ್ಲ. ಆದರೂ ಅವರು ಅಷ್ಟೊಂದು ಪ್ರೀತಿ ತೋರಿಸುತ್ತಿದ್ದಾರಲ್ಲ ಅದು ಮುಖ್ಯ ಅನಿಸಿತು.
ಪ್ರತಿಯೊಬ್ಬನಿಗೆ ಆತ ನಂಬಿದ, ವಿಶ್ವಾಸದ ವಿಚಾರಗಳನ್ನು ಇದ್ದಕ್ಕಿದ್ದಂತೆ ಬಿಟ್ಟುಬಿಡು, ನಮ್ಹಂಗೆ ಇರು ಎಂದು ಹೇಳುವುದು ಸುಲಭ. ಆದರೆ ಅವರಿಗೆ ಅದು ಅಷ್ಟು ಸುಲಭ ಅಲ್ಲ. ಆದರೂ ನಾವು ಪರಸ್ಪರ ಆಸ್ಪೃಶ್ಯತೆ, ದ್ವೇಷದ ಗಡಿ ದಾಟಿದಾಗಲೇ ಪ್ರೀತಿಯ ಅನುಭವ ಆಗ್ತದ.
ಪ್ರೀತಿ, ವಿಶ್ವಾಸ, ಮಮತೆ ಮುಂದೆ ಜಾತಿ ವ್ಯವಸ್ಥೆ ಗೌಣ ಅನ್ನುವುದನ್ನು ಅವರು ತಣ್ಣಗೆ ನನಗೆ ಪಾಠ ಮಾಡಿದ ಮೇಸ್ಟ್ರು ಅನಿಸುತ್ತದೆ. ಅಂತಹವರ ಸಾಮಿಪ್ಯ ನನ್ನನ್ನು ಜಾತಿ ಸೋಂಕಿನಿಂದ ದೂರ ಇಟ್ಟಿದೆ ಅನಿಸುತ್ತದೆ.
ಅವರು ಜಾತಿ ಶ್ರೇಣಿಕರಣೆಯನ್ನು ಧಿಕ್ಕರಿಸಿ ನನಗೆ ಮಮತೆ ತೋರಿಸಿದ್ದರಲ್ಲ ಅದು ನಿಜವಾದ ಬಂಡಾಯ ಅಂತಾ ನನಗೆ ಇಂದಿಗೂ ಅನಿಸುತ್ತದೆ. ಅವರ ಮುಂದೆ ನಾನು ಗೌರವಿಸುವ ಸಾಮಾಜವಾದ ಏನೂ ಅಲ್ಲ. ಅಂತಹವರ ಇರಬೇಕು ನಮ್ಮ ಮಧ್ಯೆ ಅನಿಸುತ್ತದೆ. ಇಂದು ಅವರು ನಮ್ಮ ಮಧ್ಯೆ ಇಲ್ಲದಿದ್ದರೂ, ಜಾತಿ ಪ್ರಶ್ನೆ ಬಂದಾಗಲೆಲ್ಲ ಅವರು ನನ್ನ ನೆತ್ತೆ ಸವರಿದಂತೆ ಆಗುತ್ತದೆ.